ಕಪ್ಪಾಗಿ ಹುಟ್ಟಿದ್ದು ಕರ್ಮನಾ?- ದುನಿಯಾ ವಿಜಿ ಪ್ರಶ್ನೆಗೆ ಜಗ್ಗೇಶ್ ಉತ್ತರ

Public TV
2 Min Read

ಬೆಂಗಳೂರು: ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ ಅನ್ನೋ ನಟ ದುನಿಯಾ ವಿಜಯ್ ಪ್ರಶ್ನೆಗೆ ನವರಸ ನಾಯಕ ಜಗ್ಗೇಶ್ ಅತ್ಯಂತ ಸರಳವಾಗಿ ಉತ್ತರ ನೀಡಿದ್ದಾರೆ. ತಮಗೆ ಫೋನ್ ಮಾಡಿ ದುನಿಯಾ ವಿಜಯ್ ಮಾತನಾಡಿರುವ ವಿಷಯವನ್ನ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಗ್ಗೇಶ್-ದುನಿಯಾ ವಿಜಯ್ ಸಂಭಾಷಣೆ:
ಕರೆ ಮಾಡಿದ್ದ ವಿಜಿ, ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ ಎಂದು ದುಃಖದಿಂದ ಕೇಳಿಬಿಟ್ಟ. ನಾನು ಯಾಕೆ ಈ ಪ್ರಶ್ನೆ ಎಂದು ಕೇಳಿದೆ. ನೋೀಡಿ ಅಣ್ಣ ನಾವು ಎಷ್ಟೇ ಶ್ರಮಪಟ್ಟು ಜೀವನ ಕಟ್ಟಿಕೊಂಡರು ಸಮಾಜ ಚರ್ಮದ ಬಣ್ಣದಿಂದ ನಮ್ಮನ್ನು ಅಳೆಯುತ್ತಾರೆ. ನಾವು ನೂರು ಶ್ರೇಷ್ಠ ಸಾಧನೆ ಮಾಡಿ ಸಣ್ಣ ತಪ್ಪು ಅರಿಯದಂತೆ ನಮ್ಮಿಂದ ಆಗಿಬಿಟ್ಟರೆ ನಮ್ಮ ಸಾಧನೆ ಶೂನ್ಯಮಾಡಿ ಹಂಗಿಸಿಬಿಡುತ್ತಾರೆ. ಅದೇ ಬಿಳಿ ಚರ್ಮದ ಮನುಜರು ಆಂತರ್ಯವೆಲ್ಲಾ ಕೊಳೆತು ಸಾಧನೆ ಶೂನ್ಯವಾದರು ಅವರ ಬಿಳಿಬಣ್ಣಕ್ಕೆ ಸಮಾಜ ಅವರನ್ನ ನಂಬಿ ಬಿಡುತ್ತಾರೆ ಎಂದು ಹೇಳಿದ. ಇದನ್ನೂ ಓದಿ: ಉದ್ಯಮ ಹರಾಜು ಹಾಕೋದು ನೋಡಿದ್ರೆ ಆ್ಯಸಿಡ್ ಕುಡಿದಂತೆ ಆಗಿದೆ: ಜಗ್ಗೇಶ್ ಬೇಸರ

ನಾನು ಅದಕ್ಕೆ ಉದಾಹರಣೆ ಎಂದು ಕೇಳಿದಾಗ ಡ್ರಗ್ಸ್ ದಂಧೆಯಲ್ಲಿನ ಮಹಾಮಹಿಮರ ಹೆಸರು ಹೇಳಿದ. ಉತ್ತರವಿಲ್ಲದೆ ಕ್ಷಣಕಾಲ ಮೌನವಾಗಿ ನನ್ನ ಮೈಚರ್ಮ ನೋಡಿಕೊಂಡೆ ಕಾರಣ ನಾನು ವಿಜಿಗಿಂತ ಕಪ್ಪು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲಿ: ಡ್ರಗ್ಸ್ ಮಾಫಿಯಾ ಬಗ್ಗೆ ಜಗ್ಗೇಶ್ ಮಾತು

ನಾನು ವಿಜಿಗೆ ಇದ್ದ ಅನುಮಾನ ದುಃಖ ದೂರಮಾಡಲು ಈ ಉದಾಹರಣೆ ಹೇಳಿದೆ. ನೋಡು ವಿಜಿ ಮಧ್ಯಮ ವರ್ಗದಲ್ಲಿ ನಾವು ಹುಟ್ಟಿದ್ದು. ಗ್ರಾಮೀಣ ಬಡಕುಟುಂಬದ ತಂದೆತಾಯಿ ಉದರದಲ್ಲಿ. ಅನ್ನಕ್ಕೆ ಕೂಲಿ ಮಾಡಿ ತಿನ್ನುವ ದೇಹ ಪರಿಸರದಲ್ಲಿ ಬೆಂದು ಕೃಷ್ಣವರ್ಣವಾಗಿರುತ್ತದೆ. ಅಂತಹ ಕಷ್ಟ ಜೀವಿಗಳ ಉದರದಲ್ಲಿ ಕಪ್ಪಾಗಿ ಹುಟ್ಟುವುದು ನಮ್ಮ ಜನ್ಮಾಂತರ ಪುಣ್ಯ. ಜಗಕ್ಕೆ ಗುರು ಕೃಷ್ಣ ಕಪ್ಪು. ಶತೃಸಂಹಾರಕ ಭೈರವ ಕಪ್ಪು. ಲಯಕಾರಕ ಶಿವ ಕಪ್ಪು. ಕಾಳಿಮಾತೆ ಕಪ್ಪು. ದೇಹಕಪ್ಪಾಗಿದ್ದರು ಪರವಾಗಿಲ್ಲ. ಆದರೆ ಹೃದಯ ಕಪ್ಪಾಗಿ ಇರಬಾರದು. ಇದನ್ನೂ ಓದಿ: ಚಿತ್ರರಂಗದಲ್ಲಿ ವಾಮ ಮಾರ್ಗದಲ್ಲಿ ಗೆದ್ದವರೇ ಡ್ರಗ್ಸ್ ದಾಸರು: ಜಗ್ಗೇಶ್ ಆಕ್ರೋಶ

ಬಿಳಿಚರ್ಮಕ್ಕೆ ಸಹಜವಾಗಿ ಜನ ಮರುಳಾಗೋದು ಶೇ.100ರಷ್ಟು ಸತ್ಯ. ಗುಣವಂತ ಹೆಣ್ಣು ಕಪ್ಪಗಿದ್ದರೆ ಮೂಗು ಮುರಿದು, ಬಿಳಿಹೆಣ್ಣ ಬೇಗ ಒಪ್ಪಿ ಮದುವೆ ಆಗುತ್ತಾರೆ. ನಂತರ ಜೀವನ ಪೂರ ಬಾಯಿಬಡಿದುಕೊಂಡು ಬಾಳುವವರನ್ನು ಬಹಳ ಮಂದಿ ನೋಡಿದ್ದೇವೆ. ವಿಶೇಷವಾಗಿ ನಮ್ಮ ಕಲಾರಂಗದಲ್ಲಿ ಚರ್ಮ ಬಿಳಿ ಇದ್ದರಂತು ಅವರ ಮೇಲೆ ದೇವತೆ, ರಂಬೆ ಕೊಂಬೆ ಕೆರೆಕಟ್ಟೆ ಎಂದು ಹಾಡು ಬರೆದು ಮೆರೆಸುತ್ತಾರೆ. ಜಾಲತಾಣವೆಲ್ಲಾ ಅಂತ ಬಿಳಿಸುಂದರಿಯೇ ಆವರಿಸಿ ಹಾರಾಡುತ್ತಾರೆ. ಎಷ್ಟೋ ಪ್ರತಿಭೆ ಕಪ್ಪು ಇದ್ದರೆ ಅವಕಾಶ ವಂಚಿತರಾಗುತ್ತಾರೆ. ಅದು ಅವರವರ ಅದೃಷ್ಟ ಎಂದು ಸಮಾಧಾನ ಹೇಳಿದೆ. ಇದನ್ನೂ ಓದಿ:  ಇಂದಿನ ಕಲಬೆರಕೆ ಮುಂದೆ 24 ಕ್ಯಾರೆಟ್ ಚಿನ್ನವಿದ್ದಂತೆ: ಪಂಡರೀಬಾಯಿ ಬಗ್ಗೆ ಜಗ್ಗೇಶ್ ಮಾತು

https://www.instagram.com/p/CFXabTusAlQ/

ದುನಿಯಾ ವಿಜಯ್ ಫೋನ್ ಕರೆ ಕಡಿತವಾದ ನಂತರ ತಲೆಯಲ್ಲಿ ಕಪ್ಪು ಹುಳ ಆವರಿಸಿತು. ಮೈಬಣ್ಣ ಕಪ್ಪಗಿದ್ದರು ಪರವಾಗಿಲ್ಲಾ ಚಿಂತನೆ ಅಪರಂಜಿಯಂತೆ ಇರಲಿ. ನಾವು ಶವವಾಗಿ ಸುಟ್ಟಾಗ ಕಪ್ಪುಬಿಳಿ ಬೇಧವಿಲ್ಲದೆ ದೇಹ ಬೂದಿಯಾಗುತ್ತದೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *