ಬರ್ನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ಯುದ್ಧವನ್ನು ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಧ್ಯವರ್ತಿಗಳ ಬದಲು ನೇರವಾಗಿ ಮಾತನಾಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯ ವೇದಿಕೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್ನ ಎಲ್ಲಾ ಪ್ರದೇಶಗಳು ಯುದ್ಧದ ಪರಿಣಾಮದಿಂದ ಚೇತರಿಸಿಕೊಳ್ಳುವವರೆಗೂ ಹೋರಾಡಲಿದೆ. ಇದು ಮಾತುಕತೆಯ ಮೊದಲ ಹೆಜ್ಜೆಯಾಗಬಹುದು ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 3 ತಿಂಗಳು – ಪುಟ್ಟ ರಾಷ್ಟ್ರ ವಶಕ್ಕೆ ತಿಣುಕಾಟ
ಇದಕ್ಕೂ ಮೊದಲು ರಷ್ಯಾದೊಂದಿಗೆ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವ ಬಗ್ಗೆ ಚರ್ಚಿಸಲು ಝೆಲೆನ್ಸ್ಕಿ ಮುಂದಾಗಿದ್ದರು. ಆದರೆ ರಷ್ಯಾ ಅಧ್ಯಕ್ಷ ಇದಾವುದಕ್ಕೂ ಬಗ್ಗುವುದಿಲ್ಲ ಎಂಬುದು ಖಾತ್ರಿಯಾಗಿರುವುದರಿಂದ ಉಕ್ರೇನ್ ಅಧ್ಯಕ್ಷ ನೇರ ಮಾತುಕತೆ ನಡೆಸಲು ಸಿದ್ದರಿದ್ದಾರೆ ಎಂದಿದ್ದಾರೆ.
ಕಳೆದ ವಾರ ಝೆಲೆನ್ಸ್ಕಿ ರಾಜತಾಂತ್ರಿಕತೆ ಇಲ್ಲದೇ ಯುದ್ಧವನ್ನು ನಿಲ್ಲಿಸುವುದು ಅಸಾಧ್ಯ ಎಂದು ತಿಳಿಸಿದ್ದರು. ಉಕ್ರೇನ್ನ 2ನೇ ಮುಖ್ಯ ನಗರವಾದ ಖಾರ್ಕೀವ್ನಲ್ಲಿ ನಮ್ಮ ಪಡೆ ರಷ್ಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ. ಆದರೆ ಡಾನ್ಬಾಸ್ ನಗರದಲ್ಲಿ ರಕ್ತಸಿಕ್ತ ಪರಿಸ್ಥಿತಿ ಉಂಟಾಗಿದೆ. ಅಲ್ಲಿ ನಮ್ಮ ಹಲವು ನಾಗರಿಕರನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದಾವೋಸ್ನಲ್ಲೂ ಆಪರೇಷನ್ ಕಮಲದ ಸದ್ದು- ಸಿಎಂಗೆ ನೀವು ಸ್ಟೇಬಲ್ ಇದ್ದೀರಾ ಎಂದ ಮಿತ್ತಲ್
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ 3 ತಿಂಗಳು ಕಳೆದಿದೆ. ಜಗತ್ತಿನ 2ನೇ ಅತೀ ದೊಡ್ಡ ರಾಷ್ಟ್ರ ಪುಟ್ಟ ಉಕ್ರೇನ್ ಅನ್ನು ಇನ್ನೂ ಕೂಡಾ ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದಾಳಿ ನಡೆಸಿ ಅಪಾರ ಸಾವು-ನೋವು ಮಾಡಿದೆ ಬಿಟ್ಟರೆ, ಸಣ್ಣ ಪುಟ್ಟ ಗೆಲುವು ಸಾಧಿಸಿದೆ.