ಬೆಳಗಾವಿ: ತಮ್ಮನ ಕಿರುಕುಳ ತಾಳಲಾರದೇ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಅಣ್ಣನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಚಗಾಂವ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಉಚಗಾಂವ ಗ್ರಾಮದ ಶ್ರೀಕಾಂತ ಅಪ್ಪಾಜಿ ಜಾಧವ್(56) ಆತ್ಮಹತ್ಯೆ ಮಾಡಿಕೊಂಡವ. ಮೃತ ಶ್ರೀಕಾಂತ್ ಮತ್ತು ಆತನ ತಮ್ಮ ಮಧುಕರ್ ಜಾಧವ್ ನಡುವೆ ಜಮೀನು ವಿವಾದವಿತ್ತು. ಪದೇ ಪದೇ ಮೃತ ಶ್ರೀಕಾಂತ್ ಜಾಧವ್ಗೆ ಅವರ ಸಹೋದರ ಮಧುಕರ್ ಜಾಧವ್ ಕಿರುಕುಳ ನೀಡುತ್ತಿದ್ದನಂತೆ ಇದರಿಂದ ಬೇಸತ್ತು ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಶ್ರೀಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ಇಂದಿನಿಂದ ವಿದ್ಯುತ್ ದರ ಏರಿಕೆ
ಪ್ರಕರಣ ಹಿನ್ನೆಲೆ:
ಮಧುಕರ್ ಜಾಧವ್ ಮೃತ ಶ್ರೀಕಾಂತ್ ಹಾಗೂ ಅವರ ತಂದೆ ಅಪ್ಪಾಜಿಗೆ ತಿಳಿಸದೇ ನಾಲ್ಕು ವರ್ಷದ ಹಿಂದೆ ಸುಧೀರ್ ಗಡ್ಡೆ ಎಂಬ ಬಿಲ್ಡಪ್ಗೆ 28 ಲಕ್ಷ ರೂಪಾಯಿಗೆ 1 ಎಕರೆ 6 ಗುಂಟೆ ಜಮೀನು ಮಾರಾಟ ಮಾಡಿದ್ದನಂತೆ. ಇದು ಗೊತ್ತಾದ ಮೇಲೆ ಮಧುಕರ್ ಜಾಧವ್ ಮೇಲೆ ಶ್ರೀಕಾಂತ್ ಕೇಸ್ ಹಾಕಿದ್ದರು. ನಂತರ ರಾಜಿ ಪಂಚಾಯತಿ ಮಾಡಿ ಸಮಾಧಾನ ಪಡಿಸಲು ಮಧುಕರ್ ಮುಂದಾಗಿದ್ದನಂತೆ. ನಂತರ ಸಬ್ ರಿಜಿಸ್ಟರ್ ಕಡೆ ಹೋಗಿ ಸಹಿ ಮಾಡಿಸಿ ಶ್ರೀಕಾಂತ್ಗೆ 6 ಲಕ್ಷ ರೂಪಾಯಿ ಕೊಟ್ಟು ಮಧುಕರ್ ಕೈ ತೊಳೆದುಕೊಂಡು ಬಿಟ್ಟಿದ್ದನು. ಇದನ್ನೂ ಓದಿ: ನಾಯಿಕಚ್ಚಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವು
ನಂತರ ತಮಗಾದ ಮೋಸಕ್ಕೆ ನ್ಯಾಯ ಕೊಡಿಸುವಂತೆ ಗ್ರಾಮದ ಹಿರಿಯರ ಬಳಿ ಶ್ರೀಕಾಂತ್ ಹೋದರೂ ಗ್ರಾಮದ ಹಿರಿಯರ ಮೇಲೆ ಮಧುಕರ್ ಮತ್ತು ಆತನ ಪತ್ನಿ ಗ್ರಾಮ ಪಂಚಾಯತಿ ಸದಸ್ಯೆ ಭಾರತಿ ಒತ್ತಡ ಹಾಕಿದ್ದರಂತೆ. ಇದರಿಂದ ಮನನೊಂದು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶ್ರೀಕಾಂತ್ ಸುಪುತ್ರ ಸಂತೋಷ್ ಆರೋಪಿಸಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡ ಕಾಕತಿ ಪೊಲೀಸರು ತನಿಖೆ ನಡೆಸಿದ್ದಾರೆ.