ನೆಲಮಂಗಲ: ತನ್ನ ಮಗ-ಮಗಳು ಪರೀಕ್ಷೆಗಳಲ್ಲಿ ಪಾಸ್ ಆದರೆ ಅಥವಾ ಒಳ್ಳೆಯ ಉದ್ಯೋಗ ಸಿಕ್ಕರೆ, ಏನಾದರೂ ಸಾಧನೆ ಮಾಡಿದರೆ ಪೋಷಕರು ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಗ್ರಾಮೀಣ ಪ್ರತಿಭೆಯ ಕುಸ್ತಿಯಲ್ಲಿನ ಸಾಧನೆಗೆ ಊರಿಗೆ ಊರೇ ಖುಷಿ ಪಟ್ಟು, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಗ್ರಾಮದ ಯುವ ಕುಸ್ತಿಪಟು ಹೇಮಂತ್ ಕುಮಾರ್, ಎರಡು ವರ್ಷಗಳಿಂದ ಕುಸ್ತಿ ಅಭ್ಯಾಸವನ್ನು ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾನೆ. ಗ್ರಾಮೀಣ ಪ್ರದೇಶದ ಯುವ ಕುಸ್ತಿ ಪ್ರತಿಭೆಯನ್ನು ಗ್ರಾಮಸ್ಥರು ಗುರುತಿಸಿ, ಗ್ರಾಮದ ಹಬ್ಬವನ್ನಾಗಿ ಕುಸ್ತಿ ಪಟುವನ್ನು ಸನ್ಮಾನಿಸಿದ್ದಾರೆ. ಜೊತೆಗೆ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನೆಲಮಂಗಲ ಪಟ್ಟಣದ ಮಾರುತಿ ವ್ಯಾಯಾಮ ಶಾಲೆಯಲ್ಲಿ, ತರಬೇತುದಾರರಾದ ಪರಮೇಶ್ ಪಾಳೇಗಾರ್ ಬಳಿ ವಿದ್ಯೆ ಕಲಿತು, ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಪದಕಗಳನ್ನು ಬೇಟೆಯಾಡುತ್ತಿದ್ದಾನೆ. ಇನ್ನೂ ರಾಜ್ಯದ ಮೂಲೆ ಮೂಲೆಗಳಲ್ಲಿ 41 ಕೆ.ಜಿ. ವಿಭಾಗದಿಂದ ಪ್ರಾರಂಭ ಮಾಡಿ 57 ಕೆ.ಜಿ ವಿಭಾಗದವರೆಗಿನ ಸ್ಪರ್ಧೆಯಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾನೆ.
ಹರಿಯಾಣದಲ್ಲಿ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಸಾಧನೆ ಮಾಡಿ ಹಲವಾರು ಬಹುಮಾನ ಪಡೆದಿದ್ದಾನೆ. ಜೊತೆಗೆ ಬಿಎ ಪದವಿಯನ್ನು ಪಡೆದಿರುವ ಹೇಮಂತ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ.