ಹೈದರಾಬಾದ್: ಪತಿಯನ್ನು ಕೊಂದು, ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ಮಹಿಳೆ ತಂದಿರುವ ಘಟನೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ರೇಣಿಗುಂಟದಲ್ಲಿ ನಡೆದಿದೆ.
ರವಿಚಂದ್ರನ್ (53) ಮೃತನಾಗಿದ್ದಾನೆ. ರವಿಚಂದ್ರನ್ ಗುಂಟೂರು ಜಿಲ್ಲೆಯ ನರಸರಾವ್ಪೇಟೆಯ ಮೂಲದವರು. ವಸುಂಧರಾ ಪತಿಯನ್ನು ಕೊಂದ ಆರೋಪಿ ಪತ್ನಿಯಾಗಿದ್ದಾಳೆ. ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಠಾಣೆಗೆ ಬಂದು ಶರಣಾಗಿದ್ದಾಳೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ
ವಸುಂಧರಾ ತಮ್ಮ ಮನೆಯಲ್ಲಿ ನಡೆದ ಜಗಳದಲ್ಲಿ ಪತಿ ರವಿಚಂದ್ರನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಆತನ ತಲೆಯನ್ನು ಕತ್ತರಿಸಿ ಬ್ಯಾಗ್ನಲ್ಲಿ ಹಾಕಿಕೊಂಡು ಠಾಣೆಗೆ ಬಂದು ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಅಲ್ಲಿಗೆ ಕರೆತಂದು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗಾಗಿ ಎಸ್ವಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಯಾವುದೋ ವಿಚಾರಕ್ಕೆ ದಂಪತಿ ನಡುವೆ ಮತ್ತೆ ಜಗಳ ನಡೆದಿದ್ದು, ಆಕ್ರೋಶಗೊಂಡ ಮಹಿಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೆ ಆತನ ತಲೆಯನ್ನು ಕತ್ತರಿಸಿ ಠಾಣೆಗೆ ಹೊತ್ತೊಯ್ದಿದ್ದಾಳೆ. ದಂಪತಿಗೆ 20 ವರ್ಷದ ಮಗನಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.