ಹಾಸನ: ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಯುವ ನಾಯಕ ಪ್ರಜ್ವಲ್ ರೇವಣ್ಣ ಇಂದು ಬೇಲೂರು ಚೆನ್ನಕೇಶವನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಪ್ರಜ್ವಲ್, ಅಧಿಕಾರ ಸ್ವೀಕರಿಸಿದ ನಂತರ ಮೊದಲು ಬೇಲೂರಿನಿಂದಲೇ ಪ್ರಚಾರ ಆರಂಭಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ರಾಜ್ಯದ್ಯಾಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ, ಈ ಕುರಿತು ನನ್ನ ವರಿಷ್ಟರು ನನ್ನ ಕೆಲಸದ ಬಗ್ಗೆ ನನಗೆ ಅರಿವು ನೀಡಿದ್ದಾರೆ. ನನಗೆ ಕೊಟ್ಟಿರುವ ಸ್ಥಾನವನ್ನು ಜವಾಬ್ದಾರಿಯುತವಾಗಿ ತುಂಬುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಸಭೆಗಳಲ್ಲಿ ಭಾಗವಹಿಸಿ ಪಕ್ಷ ಸಂಘಟನೆ ನನ್ನ ಸಲಹೆಗಳನ್ನು ನೀಡುತ್ತೇನೆ ಎಂದು ಹೇಳಿದ ಅವರು ಕುಮಾರಣ್ಣ ಮುಖ್ಯಮಂತ್ರಿಯಾಗಬೇಕು, ಆಗ ರೈತರ ಜೀವನ ಸುಧಾರಣೆಯಾಗುತ್ತದೆ ಎಂದರು.
ಕುಮಾರಣ್ಣ ಸಿಎಂ ಆಗುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರ ಸಮಸ್ಯೆಗಳೂ ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳಿಗೆ ಕುಮಾರಣ್ಣನ ಆಯ್ಕೆಯೇ ಉತ್ತರ ಎಂದು ಪ್ರಜ್ವಲ್ ತಮ್ಮ ಚಿಕ್ಕಪ್ಪ ಹೆಚ್.ಡಿ.ಕೆ ಪರ ಪ್ರಚಾರ ಆರಂಭಿಸಿದರು.
ರಾಜ್ಯದಲ್ಲಿ ಜೆಡಿಎಸ್ ಪರ ಜನತೆಯ ಒಲವಿದೆ, ಇನ್ನು ಪಕ್ಷ ಅಧಿಕಾರಕ್ಕೆ ಬಂದಲ್ಲಿ ಡಿಸಿಎಂ ಹುದ್ದೆಯನ್ನು ದಲಿತರಿಗೆ ನೀಡಬೇಕು ಎಂದು ಅಭಿಪ್ರಾಯ ಕೂಡ ವ್ಯಕ್ತಪಡಿಸಿದರು. ಅತೀ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹುದ್ದೆ ನೀಡಿದ್ದಾರೆ. ನಾನು ಪಕ್ಷದ ಕಾರ್ಯಕರ್ತರಿಗೆ ಚಿರಋಣಿಯಾಗಿರುತ್ತೇನೆ. ಈ ವೇಳೆ ತಾತ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ನನಗೆ ಆಯ್ಕೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಧನ್ಯವಾದ ತಿಳಿಸಿದರು.