ಸಿನಿಮಾ ರಂಗದಲ್ಲಿ ಈಜುವ ಕನಸು ಇಟ್ಟುಕೊಂಡು ಬರುವ ಅದೆಷ್ಟೋ ಪ್ರತಿಭೆಗಳು ದಡ ಸೇರಲು ನಾನಾ ರೀತಿಯ ಸರ್ಕಸ್ ಮಾಡ್ತಾರೆ. ಪ್ರತಿಭೆ ಜೊತೆಗೆ ಪರಿಶ್ರಮ ಇದ್ದವರು ಮಾತ್ರ ಇಲ್ಲಿ ಗೆಲುವು ದಕ್ಕಿಸಿಕೊಳ್ಳುತ್ತಾರೆ. ನಿರ್ದೇಶಕನಾಗಬೇಕು ಎಂಬ ಸ್ಪಷ್ಟ ನಿಲುವು ಹೊಂದಿದ್ದ ವೀಲ್ ಚೇರ್ ರೋಮಿಯೋ ಸೂತ್ರಧಾರಿ ನಟರಾಜ್ಗೆ ಅಷ್ಟು ಸುಲಭವಾಗಿ ನಿರ್ದೇಶಕನಾಗುವ ಅವಕಾಶ ಸಿಗಲಿಲ್ಲ. ಈ ಅವಕಾಶಕ್ಕಾಗಿ ನಟರಾಜ್ ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಕಳೆದ ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟರಾಜ್, ಆರಂಭಿಕ ದಿನಗಳಲ್ಲಿ ಕಷ್ಟವನ್ನು ನುಂಗಿಕೊಂಡು ಬಂದವರು. ಆ ನಂತರ ಮಠ ಗುರುಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಹೀಗೆ ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿದ ನಟರಾಜ್, ಗಣೇಶ್ ನಟನೆಯ ಜೂಮ್, ಆರೆಂಜ್, ರೋಮಿಯೋ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆಯುವ ಮೂಲಕ ಯಶಸ್ವೀ ಸಂಭಾಷಣಾಕಾರರಾಗಿಯೂ ಚಿತ್ರರಂಗಕ್ಕೆ ಪರಿಚಿತರಾದರು. ಇದನ್ನೂ ಓದಿ: ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು
ದಶಕಕ್ಕೂ ಹೆಚ್ಚು ಕಾಲ ನಿರ್ದೇಶನ ವಿಭಾಗದಲ್ಲಿ, ಸಂಭಾಷಣೆಗಾರನಾಗಿಯೂ ತಮ್ಮ ಕಲಾಚಾಕಚಕತ್ಯೆ ತೋರಿಸಿದ ನಟರಾಜ್, ವೀಲ್ ಚೇರ್ ರೋಮಿಯೂ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟರು. ಪ್ರೇಕ್ಷಕರ ರುಚಿಗೆ ತಕ್ಕಂತೆ, ಅವರನ್ನು ಮನರಂಜಿಸುವ ಸಿನಿಮಾ ಮಾಡಲೇಬೇಕು ಎಂಬ ಛಲ ತೊಟ್ಟು ನಟರಾಜ್ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ತಯಾರಿಸಿದ್ದಾರೆ.
ಹೊಡಿ ಬಡಿ ಸಿನಿಮಾಗಳ ಹಾವಳಿ ನಡುವೆ ಎಲ್ಲಾ ಚಿತ್ರಪ್ರೇಮಿಗಳಿಗೆ ಇಷ್ಟವಾಗುವ, ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವನ್ನು ನಟರಾಜ್ ಕಟ್ಟಿಕೊಟ್ಟಿದ್ದಾರೆ ಅನ್ನೋದು ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಗೆ ಸಿಕ್ಕ ಯಶಸ್ಸು ಉದಾಹರಣೆ. ನಮ್ಮ ನಿಮ್ಮ ಮಧ್ಯೆ ನಡುವೆಯ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ವೀಲ್ ಚೇರ್ ರೋಮಿಯೋ ಸಿನಿಮಾವನ್ನು ನಟರಾಜ್ ನಿರ್ದೇಶನ ಮಾಡಿದ್ದಾರೆ. ಕಣ್ಣು ಕಾಣದ ವೇಶ್ಯೆ ಮತ್ತು ಸದಾ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ರೋಮಿಯೋ ನಡುವಿನ ಪ್ರೀತಿ ಜೊತೆಗೆ ತಂದೆ-ಮಗನ ಸೆಂಟಿಮೆಂಟ್ನ ಈ ಸಿನಿಮಾ ಇದೇ 27ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ರೋಮಿಯೋ ಆಗಿ ರಾಮ್ ಚೇತನ್ ನಟಿಸಿದ್ದು, ಜೂಲಿಯಟ್ ಆಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡುವುದು ಸತ್ಯ. ಇದನ್ನೂ ಓದಿ: ನಿರ್ದೇಶಕ ಆರ್ಜಿವಿ ವಿರುದ್ಧ 56 ಲಕ್ಷ ವಂಚನೆ ಪ್ರಕರಣ ದಾಖಲು