ಉಡುಪಿ: ಬೆಂಗಳೂರಿನ ಪ್ರೇಮಿಗಳಿಬ್ಬರು ಉಡುಪಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಆತ್ಮಹತ್ಯೆಗೂ ಮುನ್ನ ಪೋಷಕರು ಇಬ್ಬರ ವಿವಾಹವನ್ನು ತಿರಸ್ಕರಿಸಿದ್ದರು ಎಂಬುದಾಗಿ ತಿಳಿದು ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪೋಷಕರು `ಅವನು ಯಾರು ಅನ್ನೋದೇ ನಮಗೆ ಗೊತ್ತಿಲ್ಲ, ಮಮ್ಮಿ ಡ್ಯಾಡಿ ಕ್ಷಮಿಸಿಬಿಡಿ ಅಂತ ಕಳಿಸವ್ನೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂಟರ್ವ್ಯೂಗೆಂದು ಹೋದ ಯುವತಿ, ಟ್ಯಾಲಿಕ್ಲಾಸ್ಗೆ ಹೋಗ್ತೀನೆಂದಿದ್ದ ಯುವಕ – ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುವತಿ ತಾಯಿ ರತ್ನಮ್ಮಾ, 23 ವರ್ಷ ಬೆಳೆಸಿದ ಮಗಳು ಈ ತರ ಹೋಗ್ತಾಳೆ ಅಂತ ಕನಸಲ್ಲೂ ಯೋಚಿಸಿರಲಿಲ್ಲ. ನಮಗೆ ಅನುಮಾನ ಕೂಡ ಇರಲಿಲ್ಲ. ಬುಧವಾರ 11 ಗಂಟೆಗೆ ಹೋಗಿದ್ಲು. ಸಂಜೆ ದೂರು ಕೊಟ್ಟಿದ್ವಿ. ಅವನು ಯಾರು ಅನ್ನೋದೇ ನಮಗೆ ಗೊತ್ತಿಲ್ಲ. ಇವತ್ತು ಬೆಳಗ್ಗೆ 3 ಗಂಟೆಗೆ ಹುಡುಗನ ಮೊಬೈಲ್ ನಿಂದ ನನ್ನ ಮಗನ ಮೊಬೈಲ್ಗೆ ಮಮ್ಮಿ ಡ್ಯಾಡಿ ನನ್ನನ್ನು ಕ್ಷಮಿಸಿಬಿಡಿ ಅಂತ ಮೆಸೇಜ್ ಬಂದಿದೆ ಎಂದು ಪೋಷಕರು ತಿಳಿಸಿದ್ದಾರೆ.
ನಮ್ಮ ಹುಡುಗಿ ಬಿಕಾಂ ಓದಿದ್ಲು, ಬುಧವಾರ ಹೆಬ್ಬಾಳದಲ್ಲಿ ಇಂಟರ್ವ್ಯೂ ಇದೆ ಅಂತ ಹೋಗಿದ್ಲು. ನಾವು ಅವನ ಮುಖ ನೋಡಿದ್ದೇ ಇವತ್ತು ಎಂದು ಜ್ಯೋತಿ ನೆನೆದು ತಾಯಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕಾರೊಳಗೆ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ!
ಕೊನೆಯ ಸಂದೇಶ ಏನಿತ್ತು?: ಯಶವಂತ್ ತನ್ನ ಮೊಬೈಲ್ನಿಂದ ನಮ್ಮನ್ನು ಕ್ಷಮಿಸಿಬಿಡಿ ಎಂದು ಕೊನೆಯ ಸಂದೇಶ ಕಳುಹಿಸಿದ್ದ. ಹೆತ್ತವರು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈಕೆಗೆ ಮೋಸ ಮಾಡಿ ವಾಪಸ್ ಬರುವುದೂ ನನ್ನಿಂದ ಅಸಾಧ್ಯ. ನನಗೆ ಬಾಡಿಗೆ ಮನೆ ಸಿಕ್ಕಿದೆ. ಉದ್ಯೋಗವೂ ಸಿಕ್ಕಿದೆ. ಆದರೂ ನಾವಿಬ್ಬರು ಸಂತೋಷವಾಗಿಲ್ಲ. ನಾವು ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ. ನನ್ನನ್ನು ಕ್ಷಮಿಸಿಬಿಡಿ ಎಂದು ಸಂದೇಶ ಕಳುಹಿಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮೃತ ಯುವಕನ ತಂದೆ ವೆಂಕಟರಾವ್ ಸ್ನೇಹಿತ ಮಹಾವೀರ್ ಸಿಂಗ್ ಮಾತನಾಡಿ, ಯಶವಂತ್ ತುಂಬಾ ಸೆನ್ಸಿಟಿವ್ ಹಾಗೂ ಒಳ್ಳೆಯ ಹುಡುಗ. ಅವರ ತಂದೆ ತುಂಬಾ ಚೆನ್ನಾಗಿ ಬೆಳೆಸಿದ್ದರು. ಯಾವುದಕ್ಕೂ ತೊಂದರೆ ಇರಲಿಲ್ಲ. ಅವನೂ ಸಹ ಯಾರ ಹತ್ತಿರವೂ ಮಾತನಾಡುತ್ತಿರಲಿಲ್ಲ. ಈ ರೀತಿ ಮಾಡಿಕೊಂಡಿರೋದು ಬಹಳ ನೋವಿದೆ ಎಂದು ಹೇಳಿದ್ದಾರೆ.