Dharwad
ವಿನಯ್ ಕುಲಕರ್ಣಿ ಬಂಧನ ಅತ್ಯಂತ ನೋವಿನ ಸಂಗತಿ: ಎಚ್ಕೆ ಪಾಟೀಲ್

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐದಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ಮಾಜಿ ಸಚಿವ ಎಚ್ಕೆ ಪಾಟೀಲ್ ಭೇಟಿ ನೀಡಿದರು.
ಧಾರವಾಡದ ಶಿವಗಿರಿಯ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಒತ್ತಡ ಹೇರುವ ಕ್ರಮಗಳು ನಡೆದಿವೆ. ವಿನಯ್ ಕಲಕರ್ಣಿ ಬಂಧನ ಅತ್ಯಂತ ನೋವಿನ ಸಂಗತಿ ಹಾಗೂ ಖಂಡನೀಯ ಎಂದು ಹೇಳಿದರು.
ಹತ್ತು ಹಲವು ಕಡೆ ಬಿಜೆಪಿ ಸರ್ಕಾರ ಸಿಬಿಐ, ಐಟಿ, ಇಡಿಗಳನ್ನು ರಾಜಕೀಯ ದುರುಪಯೋಗ ಮಾಡಿದೆ. ಈ ರೀತಿಯ ರಾಜಕೀಯ ದುರುಪಯೋಗಗಳಲ್ಲಿ ವಿನಯ್ ಕುಲಕರ್ಣಿ ಘಟನೆ ಸಹ ಒಂದು. ರಾಜಕೀಯದಲ್ಲಿ ಈ ರೀತಿಯ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲವೂ ಪ್ರಜಾಪ್ರಭುತ್ವವನ್ನು ಅಶಕ್ತಗೊಳಿಸುವ ಕೆಲಸ. ಕಾನೂನಿನ ಮುಂದೆ ಎಲ್ಲರೂ ಸಮನಾಗಿಯೇ ಇರುತ್ತಾರೆ. ಆದರೆ ಅನ್ಯಾಯವಾಗಿ ಭಯ ಹುಟ್ಟಿಸುವ ರಾಜಕಾರಣ ಒಳ್ಳೆಯದಲ್ಲ ಎಂದು ಹೇಳಿದರು.
