ದೈವ ನರ್ತಕರಿಗೆ ಮಾಸಾಶನ ಘೋಷಿಸಿದ ಬೆನ್ನಲ್ಲೇ, ವೀರಗಾಸೆ ಸೇರಿದಂತೆ ಇತರ ಕಲಾವಿದರಿಗೂ ಮಾಸಾಶನ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಧನಂಜಯ್ (Dhananjay) ನಟನೆಯ ಹೆಡ್ ಬುಸ್ (Head Bush) ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೆ ಸಚಿವ ಸುನೀಲ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು. ಹಾಗಾಗಿ ವೀರಗಾಸೆ ಕಲಾವಿದರಿಗೆ ಮಾಸಾಶನ ಕೊಟ್ಟು ಅವರ ಮೇಲೆ ಪ್ರೀತಿ ತೋರಿಸಿ ಎಂದು ಟ್ರೆಂಡ್ ಮಾಡಲಾಗಿತ್ತು.
ಈ ಕುರಿತಂತೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ (Sunil Kumar), ‘ಈಗಾಗಲೇ ವೀರಗಾಸೆ, ಕಂಸಾಳೆಯವರಿಗೆ ಮಾಸಾಶನ ಕೊಡಲಾಗ್ತಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ದೈವ ನರ್ತಕರನ್ನ ಸೇರಿಸಿರಲಿಲ್ಲ ಈಗ ಸೇರಿಸಿದ್ದೇವೆ.’ ಎಂದಿದ್ದಾರೆ. ಈ ಮೂಲಕ ವೀರಗಾಸೆ, ಕಂಸಾಳೆ ಅವರಿಗೆ ಮಾಸಾಶನ ಕೊಡುತ್ತಿರುವ ಕುರಿತಾದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
ಹೆಡ್ ಬುಶ್ ಸಿನಿಮಾದ ಬಗ್ಗೆಯೂ ಮಾತನಾಡಿರುವ ಸಚಿವರು, ‘ನಾನು ನೋಡಿಲ್ಲ. ವಿವಾದದ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಮನರಂಜನೆಗಾಗಿ ಸಾಂಸ್ಕೃತಿಕ ಚಟುವಟಿಕೆಗೆ ಅವಮಾನ ಮಾಡೋದು ಬೇಡ. ಸಿನಿಮಾ ಮಾತ್ರ ಅಲ್ಲ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಯಾವುದೇ ಅಪಮಾನ ಮಾಡೋದು ಬೇಡ . ಚಿತ್ರ ನಿರ್ದೇಶಕರೇ ಇದನ್ನ ಗಮನಿಸಬೇಕು. ಪುರುಸೋತ್ತು ಸಿಕ್ಕರೆ ಸಿನಿಮಾ ನೋಡ್ತೀನಿ’ ಎಂದಿದ್ದಾರೆ ಸುನಿಲ್ ಕುಮಾರ್.
ವೀರಗಾಸೆಗೆ (Veeragase) ಅವಮಾನ ಆಗಿದ್ದರೆ, ಅದನ್ನು ಚಿತ್ರತಂಡ ಸರಿಪಡಿಸಿ ಎಂದು ಸಚಿವರು ಟ್ವಿಟ್ ಮಾಡಿ, ತಮ್ಮ ಕಾಳಜಿ ತೋರುತ್ತಿದ್ದಂತೆಯೇ ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದರು. ಸಾವಿರಾರು ಜನರು ಸಚಿವರಿಗೆ ಟ್ವಿಟ್ ಮಾಡಿದ್ದರು. ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.