ನವದೆಹಲಿ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು, ತಾವು ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಂಭ್ರಮವನ್ನು ಇಂದೋರ್ನಲ್ಲಿ ಪತ್ನಿಯ ಕುಟುಂಬದವರೊಂದಿಗೆ ಆಚರಿಸಿಕೊಳ್ಳಲು ಬಯಸಿದ್ದರಂತೆ.
ಇದೇ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ವರುಣ್ ಸಿಂಗ್ ಅವರು, ಇಂದೋರ್ನಲ್ಲಿರುವ ಪತ್ನಿ ಗೀತಾಂಜಲಿ ಅವರ ಪೋಷಕರ ಮನೆಗೆ ತೆರಳಿ ಸಂಭ್ರಮ ಕೂಟವನ್ನು ಏರ್ಪಡಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಶೌರ್ಯ, ಶೌರ್ಯೇತರ ಪ್ರಶಸ್ತಿ ಪಡೆದ ಯೋಧರ ಅನುದಾನ ಹೆಚ್ಚಳಕ್ಕೆ ಸಿಎಂ ಅಸ್ತು
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು, 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಸಿಎ ತೇಜಸ್ ಯುದ್ಧ ವಿಮಾನವನ್ನು ಸಮರ್ಥವಾಗಿ ಲ್ಯಾಂಡಿಂಗ್ ಮಾಡಿ ಅದರಲ್ಲಿದ್ದ ಯೋಧರ ಪ್ರಾಣ ಉಳಿಸಿದಕ್ಕಾಗಿ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು. ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೀಡಿ ಗೌರವಿಸಿದ್ದರು.
ಈ ಸಂಭ್ರಮವನ್ನು ತನ್ನ ಪತ್ನಿಯೊಂದಿಗೆ ಅವರ ಪೋಷಕರ ಮನೆಗೆ ತೆರಳಿ ಆಚರಿಸಿಕೊಳ್ಳಲು ವರುಣ್ ಸಿಂಗ್ ನಿರ್ಧರಿಸಿದ್ದರು. ಆದರೆ ಡಿಸೆಂಬರ್ 8ರಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ವರುಣ್ ಸಿಂಗ್ ಗಂಭೀರ ಗಾಯಗೊಂಡು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿಧನರಾದರು. ಇದನ್ನೂ ಓದಿ: ಕುಲ್ಗಾಮ್ನಲ್ಲಿ ಇಬ್ಬರು ಉಗ್ರರ ಹತ್ಯೆ
ವರುಣ್ ಸಿಂಗ್ 2008ರಲ್ಲಿ ಗೀತಾಂಜಲಿ ಅವರೊಂದಿಗೆ ವಿವಾಹವಾದರು. ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.