ಲಕ್ನೋ: ಉತ್ತರ ಪ್ರದೇಶದ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಮೌರ್ಯ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಮಾವ, ಸಮಾಜವಾದಿ ಪಕ್ಷದ ಮಾಜಿ ಶಾಸಕರಾದ ಪ್ರಮೋದ್ ಗುಪ್ತಾ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ಹುಡುಗಿ ಹೋರಾಡಬಲ್ಲೇ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯಗೆ ಕಾಂಗ್ರೆಸ್ಸಿನಿಂದ ಟಿಕೆಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅವರು ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಕುರಿತು ಪ್ರತಿಕ್ರಿಯಿಸಿರುವ ಅವರು, ಲಂಚ ನೀಡಲು ಒಪ್ಪದ ಕಾರಣ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿಲ್ಲ. ಅಲ್ಲದೆ ಒಂದು ತಿಂಗಳ ಹಿಂದೆ ಕಾಂಗ್ರೆಸ್ಗೆ ಸೇರಿರುವ ವ್ಯಕ್ತಿಯೊಬ್ಬರಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಪಕ್ಷದ ಪ್ರಚಾರಕ್ಕಾಗಿ ನನ್ನನ್ನು ಹಾಗೂ ನನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವ 10 ಲಕ್ಷ ಮಂದಿಯನ್ನು ಬಳಕೆ ಮಾಡಿಕೊಂಡಿದೆ. ಆದರೆ ಇದೀಗ ಟಿಕೆಟ್ ನಿಡಲು ಮಾತ್ರ ಪಕ್ಷ ಹಿಂದೇಟು ಹಾಕಿದೆ. ಇದು ಪಕ್ಷ ನನಗೆ ಮಾಡಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು.
ವಿಧಾನಸಭೆ ಚುನಾವಣೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗಾಗಿ ಕಾಂಗ್ರೆಸ್ ಲಡ್ಕಿ ಹೂ, ಲಡ್ ಕೀ ಸಕ್ತಿ ಹೂ ಎಂಬ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನದ ಪೋಸ್ಟರ್ನಲ್ಲಿ ಪ್ರಿಯಾಂಕಾ ಮೌರ್ಯ ಕಾಣಿಸಿಕೊಂಡಿದ್ದರು. ಇವರು ಲಕ್ನೋದ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಇತ್ತೀಚೆಗೆ ಕಾಂಗ್ರೆಸ್ನಿಂದ ರಿಲೀಸ್ ಆಗಿರುವ ಪಟ್ಟಿಯಲ್ಲಿ ಇವರ ಹೆಸರನ್ನು ಕೈಬಿಡಲಾಗಿದೆ. ಇದರಿಂದ ಬೇಸರಗೊಂಡಿರುವ ಅವರು ಇದೀಗ ಕಮಲಕ್ಕೆ ಸೇರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಖ್ಯಾತಿಯ ಪ್ರಿಯಾಂಕಾ ಬಿಜೆಪಿಗೆ?
ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಅಸಮಾಧಾನಗೊಳ್ಳುತ್ತಿರುವವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಂಪ್ ಆಗುತ್ತಿದ್ದಾರೆ. 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್