ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಕೊನೆಯ ಸೋಂಕಿತ ವ್ಯಕ್ತಿ ಕಾರವಾರದ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
36 ವರ್ಷದ ಭಟ್ಕಳ ಮೂಲದ ಸೋಂಕಿತ ಸಂಖ್ಯೆ 260 ಪತಂಜಲಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಆತನ ಕೋವಿಡ್ನಿಂದ ಗುಣಮುಖರಾಗಿದ್ದು, ಇಂದು ರಾತ್ರಿ ಆತನ ಡಿಸ್ಚಾರ್ಜ್ ನೊಂದಿಗೆ ಜಿಲ್ಲೆ ಈಗ ಕೊರೊನಾ ಪ್ರಕರಣದಿಂದ ಮುಕ್ತವಾಗಿದೆ.
ಮಾರ್ಚ್ 17ರಂದು ದುಬೈನಿಂದ ವಾಪಸ್ಸಾಗಿದ್ದ 36 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿತ್ತು. ಈತನಿಂದಾಗಿ 26 ವರ್ಷದ ಗರ್ಭಿಣಿ ಪತ್ನಿಗೂ ಕೊರೊನಾ ಸೋಂಕು ತಗಲಿತ್ತು. ಪ್ರಾರಂಭದಲ್ಲಿ ಕಾಣಿಸದ ಸೋಂಕಿನ ಗುಣಲಕ್ಷಣ 28 ದಿನಗಳ ಬಳಿಕ ಈ ವ್ಯಕ್ತಿಯಲ್ಲಿ ಕಂಡುಬಂದಿತ್ತು. ನಂತರ ವ್ಯಕ್ತಿಗೆ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಈತನ ಗರ್ಭಿಣಿ ಪತ್ನಿ ಕೂಡ ಕೊರೊನಾದಿಂದ ಸಂಪೂರ್ಣ ಗುಣಮುಖಗೊಂಡು ಉಡುಪಿಯಲ್ಲಿ ಡಿಸ್ಚಾರ್ಜ್ ಆಗಿದ್ದರು. ಇದೀಗ ಪತಿಯೂ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಭಟ್ಕಳದಲ್ಲಿ ಮಾತ್ರ 11 ಸೋಂಕಿತ ಪ್ರಕರಣ ದಾಖಲಾಗಿದ್ದು, ಇಂದು ಇವರೆಲ್ಲರೂ ಗುಣಮುಖರಾಗಿ ಬಿಡುಗಡೆ ಗೊಂಡಿದಾರೆ. ಕಳೆದ ಎರಡು ವಾರದಿಂದ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗದಿರುವುದು ಜಿಲ್ಲಾಡಳಿತ ಹಾಗೂ ಜನರಿಗೆ ಸ್ವಲ್ಪ ನಿರಾಳ ಭಾವ ಮೂಡಿಸಿದೆ.