ಲಕ್ನೋ: ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ಬಾಲಕಿಯರಿಗೆ ಖಾಸಗಿ ಶಾಲೆ ಮಾಲೀಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮುಜಾಫರ್ನಗರ ಜಿಲ್ಲೆಯ ಪುರ್ಕಾಜಿ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸೂರ್ಯ ದೇವ್ ಪಬ್ಲಿಕ್ ಸ್ಕೂಲ್ನ ನಿರ್ದೇಶಕ ಯೋಗೇಶ್ ಕುಮಾರ್ ಚೌಹಾಣ್ ಮತ್ತು ಪುರ್ಕಾಜಿ ಪ್ರದೇಶದ ಜಿಜಿಎಸ್ ಇಂಟರ್ನ್ಯಾಶನಲ್ ಸ್ಕೂಲ್ನ ನಿರ್ದೇಶಕ ಅರ್ಜುನ್ ಸಿಂಗ್ ಆರೋಪಿಗಳು. ಇವರು ಸಂತ್ರಸ್ತ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು. ಸಂತ್ರಸ್ತರೆಲ್ಲರೂ ಬಡಕುಟುಂಬದವರಾಗಿದ್ದಾರೆ.
ಏನಿದು ಪ್ರಕರಣ?
ಪ್ರಾಯೋಗಿಕ ಪರೀಕ್ಷೆಗೆಂದು ಬಾಲಕಿಯರನ್ನು ಮ್ಯಾನೇಜರ್ ಬೇರೆ ಶಾಲೆಗೆ ಕರೆದೊಯ್ದಿದ್ದರು. ಯೋಗೇಶ್ ಸೂರ್ಯ ದೇವ್ ಅವರು ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ 17 ಬಾಲಕಿಯರನ್ನು ಪ್ರಾಯೋಗಿಕ ಪರೀಕ್ಷೆಗೆಂದು ಜಿಜಿಎಸ್ ಶಾಲೆಗೆ ಕರೆದೊಯ್ದು ರಾತ್ರಿ ಅಲ್ಲಿಯೇ ಇರುವಂತೆ ಹೇಳಿದ್ದಾರೆ. ಆಗ ಇಬ್ಬರು ಆರೋಪಿಗಳು ಅಪ್ರಾಪ್ತ ಬಾಲಕಿಯರಿಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪೋಷಕರೂ ಎಷ್ಟೇ ಪ್ರಯತ್ನಿಸಿದರೂ ದೂರು ದಾಖಲಿಸಲು ಸಾಧ್ಯವಾಗಿರಲಿಲ್ಲ. ನಂತರ ಇಬ್ಬರು ಸಂತ್ರಸ್ತರ ಪೋಷಕರು ಸ್ಥಳೀಯ ಶಾಸಕನ ಗಮನಕ್ಕೆ ತಂದಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸ್ಥಳೀಯ ಶಾಸಕ ಅಲ್ಲಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿದ್ದಾರೆ. ಇದರಿಂದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ: ಸಿಟಿ ರವಿ
ಶಾಲೆಯ ಮಾಲೀಕರಿಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ. ಈಗಾಗಲೇ ಒಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪುರಕಾಜಿ ಠಾಣಾಧಿಕಾರಿ ವಿನೋದ್ ಕುಮಾರ್ ಸಿಂಗ್ ವಿರುದ್ಧ ಪೊಲೀಸ್ ಇಲಾಖೆ ವಿಚಾರಣೆಯನ್ನೂ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ