ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಯಾವುದೇ ಶಾಸಕನಿಗೂ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸಲು ಬಿಡುವುದಿಲ್ಲ. ಬಂಡಾಯ ಶಾಸಕರು ಅವರ ತಂದೆಯ ಹೆಸರಿನಲ್ಲೇ ಚುನಾವಣೆ ಎದುರಿಸಲಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ರಾಜಕೀಯದಲ್ಲಿ ಹಲವು ತಿರುವು ಪಡೆದುಕೊಳ್ಳುತ್ತಿವೆ. ಈ ನಡುವೆ ಏಕನಾಥ್ ಶಿಂಧೆ ಬಣದಲ್ಲಿರುವ ಬಂಡಾಯ ಶಾಸಕರು ತಮ್ಮ ಗುಂಪಿಗೆ `ಶಿವಸೇನಾ ಬಾಳಾಸಾಹೇಬ್’ ಎಂದು ಹೆಸರಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಫೋಟೋ ಕಳುಹಿಸುವಂತೆ ಪ್ರಿಯಕರನ ಕಾಟ – ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
ಇದಕ್ಕೆ ಸಂಬಂಧಿಸಿದಂತೆ ಇಂದಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಠಾಕ್ರೆ, ಚುನಾವಣೆಯಲ್ಲಿ ಗೆಲ್ಲಲು ನನ್ನ ತಂದೆಯ ಹೆಸರನ್ನು ಹೇಳಬೇಡಿ. ನಿಮ್ಮ ತಂದೆಯ ಹೆಸರನ್ನು ಬಳಸಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದ್ದಾರೆ.
ಚುನಾವಣೆಯಲ್ಲಿ ಮತ ಪಡೆಯಲು ಇಚ್ಛಿಸಿದರೆ ಈ ಶಾಸಕರು ಅವರವರ ತಂದೆಯ ಹೆಸರನ್ನು ಹೇಳಿಕೊಂಡು ಹೋಗಲಿ. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಶಿವಸೇನಾ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಆನ್ಲೈನ್ ಕ್ಲಾಸ್ನಲ್ಲಿ ಹೋಂ ವರ್ಕ್ ಬದಲಿಗೆ ಅಶ್ಲೀಲ ವೀಡಿಯೋ ಕಳಿಸಿ ತಗಲಾಕ್ಕೊಂಡ 6ನೇ ಕ್ಲಾಸ್ ವಿದ್ಯಾರ್ಥಿ
ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಂಡಾಯ ಶಾಸಕರ ವಿರುದ್ಧ ಕ್ರಮ, ಉದ್ಧವ್ ಠಾಕ್ರೆಗೆ ಅಧಿಕಾರ ಸೇರಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ. ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತ ಅನುಸರಣೆ, ಮಹಾರಾಷ್ಟ್ರದ ಏಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಸೇರಿದಂತೆ 6 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.