Districts
ಒಬ್ಬ ಪತ್ರಕರ್ತನಾಗಿದ್ದು, ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ: ಪ್ರತಾಪ್ ಸಿಂಹ

ತುಮಕೂರು: ಪ್ರಧಾನಿ ಮೋದಿಯವರು ಗ್ರಾಮ ಪಂಚಾಯತ್ ಮಟ್ಟದಿಂದ ಸಂಸತ್ವರೆಗೆ ಯಾವ್ಯಾವ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕೊಡುತ್ತೇನೆ. ಅದರಾಚೆಗೆ ಈ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಮೋದಿ ಸರ್ಕಾರದ ಒಬ್ಬ ಪ್ರತಿನಿಧಿ. ಮೋದಿಯವರು ಗ್ರಾ.ಪಂ ಮಟ್ಟದಿಂದ ಸಂಸತ್ ವರೆಗೆ ಯಾವ್ಯಾವ ಕೆಲಸ ಮಾಡಿದ್ದಾರೆ ಎಂಬುದರ ಮಾಹಿತಿ ಕೊಡ್ತೇನೆ. ಅದರಾಚೆಗೆ ಈ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ ಎಂದರು.
ನಾನು ಮೂಲತಃ ರಾಜಕಾರಣಿ ಅಲ್ಲ, ಒಬ್ಬ ಪತ್ರಕರ್ತ ಆಗಿದ್ದವನು. ಇವತ್ತು ನಾನು ರಾಜಕಾರಣದಲ್ಲಿರಬಹುದು ಆದ್ರೆ ರಾಜಕಾರಣಿಯಾಗಿಲ್ಲ. ಸೈದ್ಧಾಂತಿಕ ವಿಚಾರ, ರಾಷ್ಟ್ರೀಯತೆ ಬಂದಾಗ ಅಷ್ಟೇ ನನ್ನ ಅಭಿಪ್ರಾಯ ಹೇಳುತ್ತೇನೆ. ಇನ್ನು ಸಚಿವ ಸಂಪುಟ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದರು.
ಇದೇ ವೇಳೆ ರೋಹಿಣಿ ಸಿಂಧೂರಿ ಹಾಗೂ ಶಾಸಕರ ನಡುವಿನ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿ, ಜಿಲ್ಲೆಯ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿರುತ್ತೆ. ಜಿಲ್ಲಾಧಿಕಾರಿಗಳಿಗೆ ಮಾತ್ರ ನ್ಯಾಯಾಂಗ ಮತ್ತು ಕಾರ್ಯಾಂಗದ ಅಧಿಕಾರ ಇರುತ್ತೆ. ಜಿಲ್ಲೆಯಲ್ಲಿ ಏನಾದ್ರು ಅವಘಡಗಳು ಸಂಭವಿಸಿದ್ರೆ ಜಿಲ್ಲಾಡಳಿತವನ್ನ ಹೊಣೆಗಾರಿಕೆಯನ್ನಾಗಿ ಮಾಡುತ್ತೇವೆ. ಜಿಲ್ಲಾಧಿಕಾರಿಗೆ ಅಷ್ಟು ದೊಡ್ಡ ಜವಾಬ್ದಾರಿ ಕೊಟ್ಟಿರುವಾಗ, ಅದನ್ನು ನಿರ್ವಹಣೆ ಮಾಡೋ ವೇಳೆ ಶಾಸಕರಾಗಲಿ, ಸಂಸದರಾಗಲಿ ಅಡಚಣೆ ಮಾಡೋದು ಸರಿಯಲ್ಲ ಎಂದು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುವ ಅಧಿಕಾರಿಗಳಿಗೆ ನಾವು ಬೆಂಬಲಿಸುತ್ತಾ ಬಂದಿದ್ದೇವೆ. ಹಿಂದೆ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಒಳ್ಳೆ ಕೆಲಸ ಮಾಡಿದ್ರು, ಅವರಿಗೆ ನಾವು ಬೆಂಬಲಿಸಿದ್ವಿ. ಈಗ ರೋಹಿಣಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ಇಲ್ಲಿಯ ಶಾಸಕರು ಎರಡುಮೂರು ಬಾರಿ ಗೆದ್ದು ಬಂದ್ರು ಯಾಕೆ ಇಂತಹ ಕಾರ್ಯಕ್ರಮಗಳನ್ನು ಮಾಡಲಿಲ್ಲ..? ಅಧಿಕಾರಿಗಳು ಉತ್ತಮ ಕೆಲಸ ಮಾಡುವಾಗ ಯಾರೂ ಅಡಚಣೆ ಮಾಡಬಾರದು. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇರಬೇಕು ಎಂದು ನುಡಿದರು.
