ಲಕ್ನೋ: 20ಕ್ಕೂ ಹೆಚ್ಚು ರೈತರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಒಂದು ನದಿಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಘಟನೆ ನಡೆದ ವೇಳೆ 13 ಮಂದಿ ನದಿಯನ್ನು ಈಜಿ ಪಾರಾಗಿದ್ದಾರೆ. ಆದರೆ ಉಳಿದವರು ನಾಪತ್ತೆಯಾಗಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ರೈತರು ತಾವು ಬೆಳೆದಿದ್ದ ಸೌತೆಕಾಯಿಯನ್ನು ಸಮೀಪದ ಮಂಡಿ ಗ್ರಾಮದಲ್ಲಿ ಮಾರಾಟ ಮಾಡಿ, ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಪಾಲಿ ಪ್ರದೇಶದ ಗರ್ರಾ ನದಿಯ ಸೇತುವೆಯ ಮೇಲೆ ಟ್ರ್ಯಾಕ್ಟರ್ ಚಕ್ರವೊಂದು ಕಳಚಿ ಬಿದ್ದಿದೆ. ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರಾಲಿ ಸಮೇತ ರೈತರು ನೀರಿಗೆ ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿ ಶ್ಯಾಮ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ
ನದಿಗೆ ಬಿದ್ದಿರುವ ಟ್ರ್ಯಾಕ್ಟರ್ ಇನ್ನೂ ಪತ್ತೆಯಾಗಿಲ್ಲ. ಅದಕ್ಕಾಗಿ ಕ್ರೇನ್ ಅನ್ನು ತರಿಸಲಾಗಿದೆ. ಸೇತುವೆಯ ಕೆಳಗಡೆ ಬಲೆಗಳನ್ನೂ ಇಡಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರೂ ಶಾಮೀಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಾವು ರಾಜ್ಯ ವಿಪತ್ತು ಪಡೆಗೆ ಕರೆ ನೀಡಿದ್ದು, ಅವರು ಶೀಘ್ರವೇ ಆಗಮಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನ ಬಂಧಿಸಿದ ಬಿಎಸ್ಎಫ್