ಚಾಮರಾಜನಗರ: ಇತ್ತೀಚೆಗೆ ಸಾರಿಗೆ ಸಂಸ್ಥೆಯ ಬಸ್ ಗಳು ಅಪಘಾತಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಸಾರಿಗೆ ಇಲಾಖೆಯ ಅಧಿಕಾರಿಗಳು ಹೋಮದ ಮೊರೆ ಹೋಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಘಟಕದ ಸಾರಿಗೆ ಸಂಸ್ಥೆಯ ಬಸ್ ಗಳು ಇತ್ತೀಚೆಗೆ ಅಪಘಾತಕ್ಕೀಡಾಗುತ್ತಿವೆ. ಕಳೆದ ವಾರವಷ್ಟೇ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತದ್ದರಿಂದ ದೊಡ್ಡ ದುರಂತವೊಂದು ತಪ್ಪಿತ್ತು. ಇದರಿಂದಾಗಿ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದರು.
ಈ ಘಟನೆಯಾದ ಮರು ದಿನವೇ ಚಾಮರಾಜನಗರ ಘಟಕದ ಇನ್ನೊಂದು ಬಸ್ ಸಂತೇಮರಹಳ್ಳಿ ವೃತ್ತದಲ್ಲಿ ಬ್ರೇಕ್ ವಿಫಲಗೊಂಡು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು. ಅಲ್ಲೂ ಕೂಡ ಸಣ್ಣ ಪುಟ್ಟ ಗಾಯಗಳಿಂದ ಪಾದಚಾರಿಗಳು ಹಾಗೂ ಪ್ರಯಾಣಿಕರು ಪಾರಾಗಿದ್ದರು.
ಈ ಅವಘಡಗಳಿಂದ ವಿಚಲಿತರಾಗಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಈಗ ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರ ಸಾರಿಗೆ ಡಿಸಿ ಅಶೋಕ್ ಕುಮಾರ್ ಆದೇಶದ ಮೇರೆಗೆ ಇಂದು ಬೆಳಗ್ಗೆ ಗುಂಡ್ಲುಪೇಟೆ ಘಟಕದಲ್ಲಿ ಗಣಪತಿ ಹೋಮ ನಡೆಸಿ ಇನ್ನು ಮುಂದೆ ಅಪಘಾತವಾಗದೇ ಇರಲೆಂದು ಪ್ರಾರ್ಥನೆ ಮಾಡಿಕೊಂಡಿದ್ದಾರೆ.