ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾಸ್ ಲೀಡರ್, ಆದ್ರೆ ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು, ಕೊಡಬಾರದು? ಅನ್ನೋದನ್ನ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡುತ್ತದೆ. ಅದೇ ಸರ್ವೋಚ್ಚ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ನಗರದಲ್ಲಿಂದು ಮಾತನಾಡಿರುವ ಅವರು, ಯಡಿಯೂರಪ್ಪ ಚುನಾವಣೆ ನಿಲ್ಲಲ್ಲ ಅಂದಿದ್ದಾರೆಯೇ ಹೊರತು, ಸಕ್ರಿಯ ರಾಜಕೀಯದಿಂದ ದೂರ ಹೋಗ್ತೀನಿ ಅಂದಿಲ್ಲ. ಅವರು ಮಾಸ್ ಲೀಡರ್, ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಪಾರ್ಟಿ ಕಟ್ಟಿದವರಲ್ಲಿ ಅವರೂ ಒಬ್ಬರು. ನಮ್ಮಲ್ಲಿ ಪ್ರಧಾನಿಗೂ ಟಿಕೆಟ್ ಫೈನಲ್ ಮಾಡೋದು ಪಾರ್ಲಿಮೆಂಟರಿ ಬೋರ್ಡ್. ಅದೇ ಸರ್ವೋಚ್ಚ, ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು, ಕೊಡಬಾರದು? ಅನ್ನೋದನ್ನ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷದ ವ್ಯವಸ್ಥೆ ಹೇಗಿದೆ ಅನ್ನೋದು ಹಿರಿಯ ನಾಯಕ ಆಗಿರುವ ಯಡಿಯೂರಪ್ಪ ಅವರಿಗೇ ಗೊತ್ತಿದೆ ಎಂದು ಕುಟುಕಿದ್ದಾರೆ.
ಅವರು ಕೇವಲ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇಲ್ಲಿ ಯಾವುದೇ ಗೊಂದಲ ಇಲ್ಲ. ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮೂರಂತಸ್ತಿನ ಕಟ್ಟಡದಲ್ಲಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕು – ಯಶಸ್ವಿ ಕಾರ್ಯಾಚರಣೆ
ನೂತನ ರಾಷ್ಟ್ರಪತಿಗಳ ಪದಗ್ರಹಣ ಕಾರ್ಯಕ್ರಮಕ್ಕಾಗಿ ಸಿಎಂ ದೆಹಲಿಗೆ ಹೋಗಿದ್ದಾರೆ. ತುಂಬಾ ಜನ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿದೆ, ರಮೇಶ್ ಜಾರಕಿಹೊಳಿಗೆ ಬಿ-ರಿಪೋರ್ಟ್ ಕೊಟ್ಟಿದ್ದಾರೆ. ಇವರಿಗೆ ಸ್ವಾಭಾವಿಕವಾಗಿ ಮತ್ತೆ ಸಂಪುಟ ಸೇರುವ ಬಯಕೆಯಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಸಿಎಂ ಚರ್ಚಿಸಿ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಸಿಎಂ ಹುದ್ದೆ ಯಾರಪ್ಪನ ಮನೆ ಆಸ್ತಿಯಲ್ಲ: ಕಾಂಗ್ರೆಸ್ ನಲ್ಲಿ ಸಿಎಂ ರೇಸ್ಗೆ ಹಲವು ಜನರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ. ರವಿ ಅವರು, ಸಿಎಂ ಹುದ್ದೆ ಯಾರಪ್ಪನ ಮನೆ ಆಸ್ತಿ ಅಲ್ಲ. ಇಲ್ಲಿ ಕುರ್ಚಿಗೆ ಕಾಂಗ್ರೆಸ್ ನಾಯಕರು ಹೋರಾಟ ಮಾಡ್ತಾ ಇದ್ದಾರೆ. ಆದ್ರೆ ಅದು ಅವರಿಗೆ ಸಿಗಲ್ಲ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಕೇವಲ ತುಷ್ಟೀಕರಣದ ಮೇಲೆ ಆಡಳಿತ ಮಾಡೋರು. ಈ ಹಿಂದೆ ಅವರಿಗೆ ಅಧಿಕಾರ ನೀಡಿದಾಗ ಏನಾಗಿದೆ ಅನ್ನೋದು ಗೊತ್ತಿದೆ. ಆದ್ದರಿಂದ ಮುಂದಿನ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು – ವೀಡಿಯೋ ವೈರಲ್
ಬರ್ತ್ ಡೇ ಫ್ಲೆಕ್ಸ್ ಹಾಕಿದವರ ಮೇಲೆ ಎಫ್ಐಆರ್ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲ್ಲ. ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ- ತಾಯಿಗೆ ನಮಸ್ಕಾರ ಮಾಡಿ ಬರ್ತೀನಿ. ನಾನು ಫ್ಲೆಕ್ಸ್ ಹಾಕಲು ಹೇಳಿಲ್ಲ, ಹಾಕಿದ್ದನ್ನೂ ಸಮರ್ಥಿಸುವುದಿಲ್ಲ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗಲಿ ಎಂದು ಒತ್ತಾಯಿಸಿದ್ದಾರೆ.
ಕಾನೂನು ಎಂಬುದು ಕಾನೂನು ಸಿದ್ದರಾಮಯ್ಯಗೂ ಒಂದೇ, ಸಿಟಿ ರವಿಗೂ ಒಂದೇ. ಫ್ಲೆಕ್ಸ್ ಹಾಕಿದವರ ಮೇಲೆ ಕಾನೂನು ಕ್ರಮ ಆಗಲಿ. ನಾನು ಫ್ಲೆಕ್ಸ್ ನಲ್ಲಿ ಇಲ್ಲ, ನಾವು ಜನರ ಹೃದಯದಲ್ಲಿ ಇರುವವನು. ಹಾಗಾಗಿ ಫ್ಲೆಕ್ಸ್ ಆದರೂ ಹರಿದು ಹಾಕಲಿ, ಬೆಂಕಿಯಾದರೂ ಹಚ್ಚಲಿ ಎಂದು ಹೇಳಿದ್ದಾರೆ.