ಮುಂಬೈ: ದೇಶದ ಎರಡನೇ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಮೂರು ಕರೆಗಳು ಬಂದಿದ್ದು, ಈ ಪೈಕಿ ಕರೆ ಮಾಡಿದವರಲ್ಲಿ ಓರ್ವನನ್ನು ಪಶ್ಚಿಮ ಮುಂಬೈನ ದಹಿಸರ್ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಇಂದು ಬೆಳಿಗ್ಗೆ 10:30ರ ಸುಮಾರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತಾಗಿ ಮುಖೇಶ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಕರೆ ಮಾಡಿದ ಅಫ್ಜಲ್ ಎಂಬಾತನನ್ನು ಬಂದಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತ ಆರೋಪಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ. ಕರೆ ಮಾಡಿದವನು ವಿಷ್ಣು ಬೌಮಿಕ್ ಆಗಿದ್ದು ಕರೆ ಮಾಡುವಾಗ ಆತ ತನ್ನ ಹೆಸರನ್ನು ಅಫ್ಜಲ್ ಎಂದು ಹೇಳಿದ್ದ.
ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದೇ ರೈತರ ಪ್ರತಿಭಟನೆ – ದರದರನೆ ಎಳೆದೊಯ್ದ ಪೊಲೀಸರು
ಕಳೆದ ವರ್ಷ ಮುಖೇಶ್ ಅಂಬಾನಿ ಅವರ ಮುಂಬೈಯಲ್ಲಿರುವ ಆಂಟಿಲಿಯಾ ನಿವಾಸದ ಹೊರಗೆ 20 ಸ್ಫೋಟಕ ಜಿಲೆಟಿನ್ ಸ್ಟಿಕ್ಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಮುಂಬೈಯ ಅಪರಾಧ ಗುಪ್ತಚರ ಘಟಕ ಸೇರಿದಂತೆ ಹಲವಾರು ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ
ಕೆಲವು ದಿನಗಳ ಬಳಿಕ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ನಿಗೂಢವಾಗಿ ಸಾವನ್ನಪ್ಪಿದ್ದು ತಿಳಿದುಬಂದಿತ್ತು. ಬಳಿಕ ಅಂಬಾನಿಯವರ ಮನೆ ಎದುರು ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರು ಹಿರೇನ್ ಅವರದ್ದೇ ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಘಟನೆಗೂ ಒಂದು ವಾರದ ಮುನ್ನ ಹಿರೇನ್ ತಮ್ಮ ಕಾರು ಕಳ್ಳತನವಾಗಿದ್ದರ ಬಗ್ಗೆ ದೂರು ನೀಡಿದ್ದರು. ಕಳೆದ ವರ್ಷ ಮಾರ್ಚ್ 5 ರಂದು ಥಾಣೆಯ ತೊರೆಯೊಂದರಲ್ಲಿ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು.