ಗುರುಗ್ರಾಮ: ಮಾರುತಿ ಸುಜುಕಿ ಹರ್ಯಾಣದಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾಗಿದ್ದು ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.75 ರಷ್ಟು ಮೀಸಲಾತಿ ನೀಡುವುದಾಗಿ ಪ್ರಕಟಿಸಿದೆ.
ಮಾರುತಿ ಸುಜುಕಿ ಕಂಪನಿ ಸೋನಿಪತ್ ಜಿಲ್ಲೆಯ ಖರ್ಖೋಡಾದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 18 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಈ ಘಟಕದಿಂದ 13 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ.
800 ಎಕ್ರೆ ಜಾಗದಲ್ಲಿ ತಲೆ ಎತ್ತಲಿರುವ ಈ ಘಟಕ 2025ಕ್ಕೆ ಕಾರ್ಯಾಚರಣೆ ಮಾಡಲಿದೆ. 8 ವರ್ಷದಲ್ಲಿ ಪೂರ್ಣವಾಗಿ ಕೆಲಸ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಗುಜರಾತ್ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್ ಹೂಡಿಕೆಯ ಚಿಪ್ ಘಟಕ ಶಿಫ್ಟ್
ಮೀಸಲಾತಿ ನಿಯಮ ಏನು?
ಈ ಹಿಂದೆ ತಿಂಗಳಿಗೆ ಗರಿಷ್ಠ 50 ಸಾವಿರ ರೂ. ವೇತನ ಪಡೆಯುವ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂಬ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿತ್ತು. ಆದರೆ ಹಲವು ಸುತ್ತಿನ ಮಾತುಕತೆಯ ಬಳಿಕ ಇದು ಈಗ 30 ಸಾವಿರ ರೂ.ಗೆ ಇಳಿಕೆಯಾಗಿದೆ.
ಈ ಹಿಂದೆ 15 ವರ್ಷದ ಹರ್ಯಾಣದಲ್ಲಿ ನೆಲೆಸಿದವರಿಗೆ ಮೀಸಲಾತಿ ನೀಡಬೇಕು ಎಂಬ ನಿಯಮ ಇತ್ತು. ಈ ನಿಯಮವನ್ನು ಸಡಿಲಿಸಲಾಗಿದ್ದು 5 ವರ್ಷ ರಾಜ್ಯದಲ್ಲಿ ನೆಲೆಸಿದವರಿಗೆ ಮೀಸಲಾತಿ ಲಾಭ ಸಿಗಲಿದೆ.
ಈ ಹಿಂದೆ ಮಾರುತಿ ಮುಖ್ಯಸ್ಥ ಆರ್ಸಿ ಭಾರ್ಗವ ಅವರು ಮೀಸಲಾತಿಯನ್ನು ವಿರೋಧಿಸಿದ್ದರು. ಆದರೆ ಈಗ ಸ್ಥಳೀಯರ ರಕ್ಷಣೆಯೂ ಬೇಕು ಎಂದು ಹೇಳಿ ಮೀಸಲಾತಿ ನಿಯಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.