ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕರಡಿಹಳ್ಳಿ ಗ್ರಾಮದಲ್ಲಿ ಇರೋದು ಒಂದೇ ದೇವಸ್ಥಾನ. ನಿಧಿ ಆಸೆಗಾಗಿ ಕಳ್ಳರು ದೇವಸ್ಥಾನದಲ್ಲಿರುವ ಮೂರ್ತಿಯನ್ನೇ ಕದ್ದುಕೊಂಡು ಹೋಗಿದ್ದಾರೆ.
ಗ್ರಾಮದಲ್ಲಿ ಕೇವಲ ನಾಯಕ್ ಮತ್ತು ಭೋವಿ ಜನಾಂಗದ ಜನರೇ ವಾಸವಿದ್ದಾರೆ. ಈ ಗ್ರಾಮಸ್ಥರು ನಿತ್ಯ ಪೂಜಿಸುತ್ತಿದ್ದ ಪುರಾತನ ಕಾಲದ ವಿಜಯನಗರದ ಅರಸರ ಕಾಲದ ಈಶ್ವರ ದೇವಾಲಯದಲ್ಲಿನ ಬಸವಣ್ಣನ ಮೂರ್ತಿಯನ್ನೇ ಮಾರ್ಚ್ 17 ರಂದು ಕಳ್ಳರು ಕಳ್ಳತನ ಮಾಡಿದ್ದಾರೆ. ಹೀಗಾಗಿ ಗ್ರಾಮಸ್ಥರಿಗೆ ಪೂಜೆ ಮಾಡಲು ದೇವರ ವಿಗ್ರಹವೇ ಇಲ್ಲದಂತಾಗಿದೆ.
ಗ್ರಾಮಸ್ಥರು ದೇವರ ಮೂರ್ತಿಯನ್ನು ಹುಡುಕಿ ಕೊಡದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಗುಡೆಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.