– ದೇವರ ಹುಂಡಿ, ಒಡವೆಯೊಂದಿಗೆ ಎಸ್ಕೇಪ್
ಬೆಂಗಳೂರು: ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ದೇವಾಲಯದ ಬೀಗ ಮುರಿದು ಸರಣಿ ಕಳ್ಳತನ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದು, ಇಂಡ್ಲವಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತಮ್ಮನಾಯಕನಹಳ್ಳಿಯಲ್ಲಿರುವ ಶನಿಮಹಾತ್ಮ ದೇವಸ್ಥಾನ, ಕಬ್ಬಾಳಮ್ಮ ದೇವಸ್ಥಾನ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನಗಳ ಬೀಗ ಹೊಡೆದು ದೇವಾಲಯದಲ್ಲಿದ್ದ ಹುಂಡಿ , ಒಡವೆ, ದೇವರ ಕಿರೀಟವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ದೇವಾಲಯದ ಹುಂಡಿಗಳಲ್ಲಿದ್ದ ಹಣವನ್ನು ತೆಗೆದುಕೊಂಡ ಕಳ್ಳರು ಖಾಲಿ ಹುಂಡಿಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಮುಂಜಾನೆ ದೇವಾಲಯದ ಬಳಿ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಪಡೆದ ಆನೇಕಲ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿದ್ದಾರೆ.