ಚೆನ್ನೈ: ತಮಿಳುನಾಡಿನ ಊಟಿಯಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಈ ಹೆಲಿಕಾಪ್ಟರ್ ಪತನಕ್ಕೂ ಮೊದಲಿನ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವೀಡಿಯೋದಲ್ಲಿ ಏನಿದೆ?: ಮಂಜು ಕವಿದ ವಾತವಾರಣವಿದೆ. ಅಲ್ಲಿ ಹೆಲಿಕಾಪ್ಟರ್ ಪತನಕ್ಕೂ ಮೊದಲು ದುರಂತ ಸ್ಥಳದಲ್ಲಿ ಹಾರಾಡುತ್ತಿದೆ. ಆದರೆ ಅದು ತೀರಾ ಕೆಳಮಟ್ಟದಲ್ಲಿ ಹಾರಾಡುತ್ತಿತ್ತು. ನಂತರದಲ್ಲಿ ಮಂಜಿನಲ್ಲಿ ಹೆಲಿಕಾಪ್ಟರ್ ಮರೆಯಾಗಿದೆ. ಈ ಹೆಲಿಕಾಪ್ಟರ್ ಹಾರಾಟವನ್ನು ಸ್ಥಳೀಯರು ಕಣ್ಣಾರೆ ಕಂಡಿದ್ದಾರೆ.
ದೆಹಲಿಯಿಂದ ಸೇನಾ ವಿಮಾನದಲ್ಲಿ ತಮಿಳುನಾಡಿಗೆ ಬಿಪಿನ್ ರಾವತ್ ವೆಲ್ಲಿಂಗ್ಟನ್ನ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್ಗೆ ಸೇನಾ ಹೆಲಿಕಾಪ್ಟರ್ನಲ್ಲಿ 14 ಮಂದಿ ಪಯಣ ಆರಂಭಿಸಿದ್ದರು. ಬುಧವಾರ ಮಧ್ಯಾಹ್ನ 12.22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ವೆಲ್ಲಿಂಗ್ಟನ್ಗೆ 7 ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್ನಲ್ಲಿ ದೊಡ್ಡ ಶಬ್ಧದೊಂದಿಗೆ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿ 13 ಮಂದಿ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತಿದೆ. ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಳಿಕ ಕಾಮ್ರಾಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದ್ದು, ದೆಹಲಿ ಕಂಟೋನ್ಮೆಂಟ್ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರರವಿದೆ. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ