ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಶಾಲೆ, ಪರೀಕ್ಷೆ ನಿಲ್ಲಿಸುವ ಅಗತ್ಯ ಬಂದರೆ ಅದಕ್ಕೆ ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಕೆಲವು ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಂಕು ಹೆಚ್ಚಳ ಆತಂಕ ತಂದಿದೆ. ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಕಂಡುಬಂದಿದೆ. 1-10 ಸರ್ಕಾರಿ ಸರ್ಕಾರಿ ಶಾಲೆಗಳಲ್ಲಿ ಸೋಂಕಿಲ್ಲ. ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಹಿನ್ನೆಲೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮಕ್ಕಳಿಗೆ ತೊಂದರೆ ಆಗಿಲ್ಲ, ಚಿಕಿತ್ಸೆ ಕೊಡಲಾಗಿದೆ. ಇಬ್ಬರು ಶಿಕ್ಷಕರಿಗೆ ಸೋಂಕು. ಯಾವುದೇ ಸಮಸ್ಯೆ, ಆತಂಕ ಇಲ್ಲ. ಇವತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಇರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ. ನಾನು ನಾಳೆ, ನಾಡಿದ್ದು, ಸೋಂಕಿತ ವಸತಿ, ನವೋದಯ ಶಾಲೆಗಳಿಗೆ ಭೇಟಿ ಕೊಡ್ತೇನೆ. ನೀತಿ ಸಂಹಿತೆ ಮುಗಿದ ಬಳಿಕ ಭೇಟಿ ಮಾಡುವುದಾಗಿ ಸಚಿವರು ತಿಳಿಸಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮಕ್ಕಳನ್ನು ಪೋಷಕರು ಈ ರೀತಿ ಕಾಪಾಡಿಕೊಳ್ಳಿ
ಕೋವಿಡ್ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಲ್ಲ ಅಂತ ವರದಿಗಳು ಬಂದಿವೆ.ಇತ್ತ ತಜ್ಞರು ಮೂರನೇ ಅಲೆ ಫೆಬ್ರವರಿ ಅಂತ್ಯಕ್ಕೆ ಬರಬಹುದು ಅಂತಿದ್ದಾರೆ. ಪರೀಕ್ಷೆ ಸಂದರ್ಭದಲ್ಲಿ ಸೋಂಕು ಹೆಚ್ಚಾದರೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಸೋಂಕು ಹೆಚ್ಚಾದರೆ ಪರೀಕ್ಷೆ ನಿಲ್ಲಿಸುವ ಸಂದರ್ಭ ಬಂದರೆ ನಿಲ್ಲಿಸ್ತೇವೆ. ಆದರೆ ಗಾಬರಿ ಪಡುವ ಅಗತ್ಯ ಇಲ್ಲ. ಕೋವಿಡ್ ಹೆಚ್ಚಾದರೆ, ಶಾಲೆ, ಪರೀಕ್ಷೆ ನಿಲ್ಲಿಸುವ ಅಗತ್ಯ ಬಂದರೆ ಅದಕ್ಕೂ ಸರ್ಕಾರ ಸಿದ್ಧ ಇದೆ. ಸದ್ಯದವರೆಗೆ ಗಾಬರಿಯಾಗುವ ಸನ್ನಿವೇಶ ಇಲ್ಲ ಎಂದರು.
ಸದ್ಯಕ್ಕೆ ರೆಸಿಡೆನ್ಸಿಯಲ್ ಶಾಲೆಗಳಲ್ಲಿ ಮಾತ್ರ ಸೊಂಕು ಕಾಣಿಸಿಕೊಂಡಿದೆ. ಇವತ್ತು ರೆಸಿಡೆನ್ಸಿಯಲ್ ಶಾಲೆಗಳಲ್ಲಿ ಪ್ರತ್ಯೇಕ ಎಸ್ ಓಪಿ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸೋಂಕು ಬಂದಿರುವ ಕಡೆಯೂ ಯಾವುದೇ ಸಮಸ್ಯೆ ಆಗಿಲ್ಲ. ತಜ್ಞರಿಂದ ಪ್ರತಿದಿನವೂ ವರದಿ ಪಡೆದುಕೊಳ್ಳುತ್ತಿದ್ದೇವೆ. ವರದಿ ಪ್ರಕಾರ ತಕ್ಷಣಕ್ಕೆ ಯಾವುದೇ ಆತಂಕ ಬೇಡ ಅಂತಲೇ ಹೇಳುತ್ತಿದ್ದಾರೆ. ಆಕಸ್ಮಾತ್ ತೀವ್ರ ಹೆಚ್ಚಳ ಕಂಡು ಬಂದರೆ ಶಾಲೆಗಳನ್ನು ಕ್ಲೋಸ್ ಮಾಡೋದಕ್ಕೂ ಕೂಡ ನಾವು ಸಿದ್ದರಿದ್ದೇವೆ. ಯಾವುದೇ ರೀತಿಯ ಆತಂಕ ಪೋಷಕರಿಗೆ ಬೇಡ ಎಂದು ಹೇಳಿದರು.