ಕೊಪ್ಪಳ: ಕುಡುಕರ ಕಾಟಕ್ಕೆ ಬೇಸತ್ತು ವಿದ್ಯಾರ್ಥಿನಿಯರು ವಸತಿ ನಿಲಯವನ್ನೇ ತೊರೆಯಲು ಮುಂದಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿನ ಕಸ್ತೂರ ಬಾ ಬಾಲಕಿಯರ ವಸತಿ ಶಾಲೆ ಬಳಿ ಬಾರ್ ತೆರೆದಿದ್ದು, ಪ್ರತಿನಿತ್ಯ ಕುಡುಕರ ಕಾಟದಿಂದಾಗಿ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ. ಅಷ್ಟೇ ಅಲ್ಲದೇ ಕುಡುಕರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೂಡ ನೀಡುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿನಿಯರು ವಸತಿ ನಿಲಯವನ್ನು ತೊರೆಯಲು ಮುಂದಾಗಿದ್ದಾರೆ.
ಇನ್ನು ಈ ಕುರಿತಂತೆ ಕುಷ್ಟಗಿ ಪೊಲೀಸರಿಗೆ ವಿದ್ಯಾರ್ಥಿನಿಯರು ದೂರು ನೀಡಿದ್ದರು. ನಂತರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕುಡುಕರ ಹಾವಳಿಯನ್ನು ಹೇಗಾದರೂ ತಪ್ಪಿಸಿ ಎಂದು ಮನವಿ ಕೂಡ ಮಾಡಿಕೊಂಡಿದ್ದರು. ಆದರೂ ಏನು ಪ್ರಯೋಜನವಾಗಿಲ್ಲ. ಕೊನೆಗೆ ಕುಡುಕರ ಕಾಟಕ್ಕೆ ಬೇಸತ್ತು ಶಿಕ್ಷಣಕ್ಕಿಂತ ನಮಗೆ ನಮ್ಮ ರಕ್ಷಣೆಯ ಅವಶ್ಯಕತೆ ಇದೆ ಆದ್ದರಿಂದ ಹಾಸ್ಟೆಲ್ ಬಿಡಲು ನಿರ್ಧಾರ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.
ವಸತಿ ನಿಲಯದ ಸಮೀಪದ ಇಷ್ಟೆಲ್ಲಾ ರಾದ್ದಾಂತ ಆಗಿದ್ದರೂ. ಯಾವೊಬ್ಬ ವಸತಿ ಶಾಲೆ ಮೇಲ್ವಿಚಾರಕರಾಗಲಿ, ಯಾವುದೇ ಅಧಿಕಾರಿಗಳು ಇತ್ತ ಸುಳಿಯದಿರುವುದು ವಿಪರ್ಯಾಸದ ಸಂಗತಿಯಾಗಿದೆ.