ಚಾಮರಾಜನಗರ: ಸರ್ಕಾರಿ ಅಧಿಕಾರಿಗಳು ಕದ್ದುಮುಚ್ಚಿ ಲಂಚ ಪಡೆಯುವುದು ಕಾಮನ್ ಆಗಿದೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ಬಹಿರಂಗವಾಗಿ ಲಂಚ ಕೇಳಿದ್ದು, ಅಲ್ಲದೇ ಲಂಚ ಕೊಡದೇ ಹೋದರೆ ಶೂಟ್ ಮಾಡುವುದಾಗಿ ಬೆದರಿಸಿರುವ ಘಟನೆ ನಡೆದಿದೆ.
ಚೆಕ್ಪೋಸ್ಟ್ ಮುಖಾಂತರ ಓಡಾಡುವ ವಾಹನಗಳನ್ನು ಪರಿಶೀಲನೆ ನಡೆಸುವುದು. ವಾಹನಗಳಲ್ಲಿ ಅಕ್ರಮ ಸಾಗಾಟ ಕಂಡರೇ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸುವುದು ಚೆಕ್ಪೋಸ್ಟ್ನಲ್ಲಿರುವ ಸಿಬ್ಬಂದಿ ಕೆಲಸವಾಗಿತ್ತು. ಆದರೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ಗಡಿ ಪಾಲಾರ್ನಲ್ಲಿ ಚೆಕ್ಪೋಸ್ಟ್ವೊಂದರಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿ ಇಲ್ಲಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುವುದು ಬಿಟ್ಟು ಲಂಚ ವಸೂಲಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಚೆಕ್ಪೋಸ್ಟ್ ಸಿಬ್ಬಂದಿಯೋರ್ವ ಲಂಚ ಕೇಳುವುದನ್ನು ಲಾರಿ ಚಾಲಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಪಾಲಾರ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೋಹನ್ ಎಂಬಾತ ಲಾರಿಗಳನ್ನು ಪರಿಶೀಲನೆ ಮಾಡುವ ನೆಪದಲ್ಲಿ ಚಾಲಕರಿಂದ ಹಣ ಕೇಳಿದ್ದಾನೆ. 30 ರೂಪಾಯಿ ನೀಡಿದರೂ, 100 ರೂಪಾಯಿ ಕೊಡುವಂತೆ ಒತ್ತಾಯ ಮಾಡಿದ್ದಾನೆ. ಈ ವೇಳೆ ಲಾರಿ ಚಾಲಕ ಹಾಗೂ ಮೋಹನ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹಣ ಕೊಡದೇ ಹೋದಲ್ಲಿ ಸಿಬ್ಬಂದಿ ಮೋಹನ್ ಗನ್ನಿಂದ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ
ಘಟನೆ ಸಂಬಂಧಿಸಿ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೋಹನ್ ಕಾವೇರಿ ವನ್ಯಜೀವಿ ವಿಭಾಗದ ಸಿಬ್ಬಂದಿ. ಪ್ರಭಾರಿಯಾಗಿ ಪಾಲಾರ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ. ವಿಷಯ ತಿಳಿದ ಕೂಡಲೇ ಆತನನ್ನು ಅಲ್ಲಿಂದ ತೆಗೆಯಲಾಗಿದೆ. ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಸದ್ಯ ಲಂಚ ಕೇಳಿದ ಮೋಹನ್ನನ್ನು ಚೆಕ್ಪೋಸ್ಟ್ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಇದನ್ನೂ ಓದಿ: ಹೈಕೋರ್ಟ್ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು