ಮುಂಬೈ: 29 ಹೊಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಮಹಾರಾಷ್ಟ್ರದ ಥಾಣೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ.
ಸುಳಿವಿನ ಆಧಾರ ಮೇರೆಗೆ ಥಾಣೆಯ ಆರ್ಥಿಕ ಅಪರಾಧ ವಿಭಾಗ(EOW) ಪುಣೆಯ ದೇಹು ರಸ್ತೆಯಲ್ಲಿದ್ದ ಶ್ರದ್ಧಾ ಶ್ರೀಕಾಂತ್ ಪಲಾಂಡೆ ಮಹಿಳೆಯನ್ನು ಬಂಧಿಸಿದೆ ಎಂದು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಪನ್ಹಾಲೆ ತಿಳಿಸಿದರು.
ಎಂಟು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಶ್ರದ್ಧಾ ಮತ್ತು ಆಕೆಯ ಪತಿ ಶ್ರೀಕಾಂತ್ ಪಾಂಡುರಂಗ ಪಲಾಂಡೆ ವಿರುದ್ಧ ಕಾಸರವಾಡವಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಎಂಪಿಐಡಿಎಯ ಸೆಕ್ಷನ್ 420(ವಂಚನೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ದಾಳಿ ವೇಳೆ ಶ್ರದ್ಧಾ ಸಿಕ್ಕಿದ್ದು, ಶ್ರೀಕಾಂತ್ ಪರಾರಿಯಾಗಿದ್ದಾನೆ ಎಂದು ವಿವರಿಸಿದರು. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ
ನಡೆದಿದ್ದೇನು?
ದಂಪತಿ ಸಲಹಾ ಸಂಸ್ಥೆಯನ್ನು ಸ್ಥಾಪಿಸಿದ್ದು, ವಿದೇಶಿ ವಿನಿಮಯ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತೆ ಎಂದು ಆದಾಯದ ಭರವಸೆ ನೀಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿದ್ದರು. ಈ ಹಿನ್ನೆಲೆ ಇವರ ಮಾತಿಗೆ ನಂಚಿಕೆಯಿಟ್ಟು ಇಬ್ಬರು ಹೂಡಿಕೆದಾರರು ಹಣವನ್ನು ಕೊಟ್ಟಿದ್ದರು. ಆದರೆ ದಂಪತಿ ಹೂಡಿಕೆದಾರರ ಬಡ್ಡಿಯನ್ನು ಮತ್ತು ಅಸಲು ಮೊತ್ತವನ್ನು ಹಿಂದಿರುಗಿಸದೆ ಪರಾರಿಯಾಗಿದ್ದಾರೆ. ಇದೇ ರೀತಿ ಇವರು ಸುಮಾರು 29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ್ದರು.
ಆರೋಪಿ ಮಹಿಳೆಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು ಮೇ 31 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕೆಯ ಪತಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.