– ಧೋನಿ ಯುಗ ಆರಂಭದ ದಿನಗಳು
– ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ
– ಐತಿಹಾಸಿಕ ದಿನ ಸ್ಮರಿಸಿ ಬಿಸಿಸಿಐ ಟ್ವೀಟ್
ಮುಂಬೈ: ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇಂದಿಗೆ ಬರೋಬ್ಬರಿ 14 ವರ್ಷಗಳು ಕಳೆದಿದ್ದು, ಈ ಐತಿಹಾಸಿಕ ದಿನವನ್ನು ಭಾರತೀಯ ಕ್ರಿಕೆಟ್ ಮಂಡಳಿ ಸ್ಮರಿಸಿ ಟ್ವೀಟ್ ಮಾಡಿದೆ.
2007ರ ಏಕದಿನ ವಿಶ್ವಕಪ್ನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ತಂಡ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಾದ ಕೆಲ ದಿನಗಳ ಬಳಿಕ ಬಿಸಿಸಿಐ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನು ಟಿ20 ತಂಡದ ನಾಯಕನಾಗಿ ಮಾಡಿ ದಕ್ಷಿಣ ಆಫ್ರಿಕಾಕ್ಕೆ ಕಳುಹಿತ್ತು. ಏಕದಿನ ವಿಶ್ವಕಪ್ ಸೋಲಿನ ಹತಾಶೆಯಲ್ಲಿದ್ದ ಭಾರತೀಯರು ಟಿ20 ವಿಶ್ವಕಪ್ನಲ್ಲಿ ಭಾರತ ಗೆಲ್ಲುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.
ಸಚಿನ್, ಗಂಗೂಲಿ, ದ್ರಾವಿಡ್ರಂತಹ ದಿಗ್ಗಜ ಆಟಗಾರರಿಲ್ಲದೆ ಟಿ20 ಆಡಲು ಭಾರತ ಮುಂದಾಗಿತ್ತು. ವೀರೇಂದ್ರ ಸೆಹ್ವಾಗ್, ಧೋನಿ, ಯುವರಾಜ್ ಸಿಂಗ್ ಬಿಟ್ಟರೆ ಉಳಿದ ಯಾವೊಬ್ಬ ಆಟಗಾರರು ಕೂಡ ಟಿ20 ಯಲ್ಲಿ ಒಂದು ಪಂದ್ಯವನ್ನು ಆಡಿರಲಿಲ್ಲ. ಹೊಸ ಹುರುಪಿನೊಂದಿಗೆ ಹೊಸ ತಂಡವೊಂದನ್ನು ಬಿಸಿಸಿಐ ಕಟ್ಟಿ ಕಳುಹಿಸಿತ್ತು. ಅನನುಭವಿ ಆಟಗಾರರನ್ನು ಕಟ್ಟಿಕೊಂಡು ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ್ದು ಈಗ ಇತಿಹಾಸ. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ
ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ, ಫೈನಲ್ನಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಗೌತಮ್ ಗಂಭೀರ್ (75), ರೋಹಿತ್ ಶರ್ಮಾ (30), ಯುವರಾಜ್ ಸಿಂಗ್ (14) ರನ್ಗಳೊಂದಿಗೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.3 ಓವರ್ಗಳಲ್ಲಿ 152 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಸೋತು ಶರಣಾಯಿತು. ಇದನ್ನೂ ಓದಿ: ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ
ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡ, ಈ ಬಾರಿ ಮತ್ತೆ ಟಿ20 ವಿಶ್ವಕಪ್ ಗೆಲ್ಲುವ ಕನಸನ್ನು ಹೊತ್ತಿದೆ. ಇದೇ ಅ.17ರಿಂದ ನವೆಂಬರ್ 15ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.