ಚಿಕ್ಕಬಳ್ಳಾಪುರ: ನಗರದಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೃತಪಟ್ಟ ಚಿಕ್ಕಬಳ್ಳಾಪುರ ತಾಲೂಕಿನ ಬಾಲಕುಂಟಹಳ್ಳಿ ಗ್ರಾಮದ ಯುವಕ ನವೀನ್ ಅವರ ನಿವಾಸಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಾವಿನ ನಂತರವೂ ಅಂಗಾಂಗ ದಾನದ ಮೂಲಕ ಐದು ಮಂದಿಯ ಜೀವ ಉಳಿಸುವ ಜೊತೆಗೆ, ಐದು ಮಂದಿಗೆ ಹೊಸ ಬದುಕು ನೀಡಿ ಬೆಳಕಾದ ನವೀನ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ಸಾವು ಬರುತ್ತದೆ. ಆದರೆ ನವೀನ್ರಂತಹ ಕೆಲವರು ಮಾತ್ರ ಮೃತಪಟ್ಟ ನಂತರವೂ ಜೀವಂತವಾಗಿರುತ್ತಾರೆ ಎಂದರು. ಇದನ್ನೂ ಓದಿ: ಊಟ ಬಿಟ್ಟು ಮರವಂತೆಗೆ ಸಿಎಂ ದೌಡಾಯಿಸಿದ್ದು ಯಾಕೆ?
ಅಂಗಾಂಗ ದಾನ ಮಾಡಿದ ನವೀನ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು ನಂತರ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ, ಐದು ಮಂದಿಗೆ ಜೀವದಾನ ಮಾಡಿದ ನವೀನ್ ಮತ್ತು ಅವರ ಕುಟುಂಬದ ಕಾರ್ಯ ಶ್ಲಾಘನೀಯವಾಗಿದೆ. ನವೀನ್ ಅಂಗಾಂಗಗಳ ರೂಪದಲ್ಲಿ ಸದಾ ಜೀವಂತವಾಗಿರಲಿದ್ದಾನೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ
ಮಾದರಿಯಾದ ನವೀನ್ ಕುಟುಂಬ:
ಗ್ರಾಮೀಣ ಪ್ರದೇಶದಲ್ಲಿ ಜನಿಸಿದವರಿಗೆ ಅಂಗಾಂಗ ದಾನದ ಬಗ್ಗೆ ಹಲವಾರು ಮೂಢನಂಬಿಕೆಗಳಿರುತ್ತವೆ. ಹಾಗಾಗಿ ಅಂಗಾಂಗಳನ್ನು ದಾನ ಮಾಡಲು ಸಹಜವಾಗಿಯೇ ಹಿಂಜರಿಕೆ ಇರುತ್ತದೆ. ಆದರೆ ಯಾವುದೇ ನಂಬಿಕೆಗಳಿಗೆ ಜೋತು ಬೀಳದೆ ಹಲವರ ಬಾಳಿಗೆ ಆಸರೆಯಾದ ನವೀನ್ ಕುಟುಂಬದ ಕಾರ್ಯ ಮಾದರಿಯಾಗಿದೆ. ಇಂತಹ ಆದರ್ಶಗಳಿಂದ ವ್ಯಕ್ತಿ ಸಾವಿನಲ್ಲೂ ಸಾರ್ಥಕತೆ ಮೆರೆಯಲು ಸಾಧ್ಯವಾಗಲಿದೆ ಎಂದರು. ಸರ್ಕಾರದಿಂದ ನವೀನ್ ಕುಟುಂಬಕ್ಕೆ ದೊರೆಯಬೇಕಾದ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡುವ ಭರವಸೆ ನೀಡಿದರು.