ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮ್ ಅವರಿಗೆ ಅರ್ಥಶಾಸ್ತ್ರದ ಕುರಿತಾಗಿ ಯಾವುದೇ ಅರಿವಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿನ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆಯಾಗಿದ್ದಾರೆ. ಸರ್ಕಾರಕ್ಕೆ ಅರ್ಥಶಾಸ್ತ್ರವು ಅರ್ಥವಾಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ಅಥವಾ ಹಣಕಾಸು ಸಚಿವರಿಗೆ ತಿಳಿದಿಲ್ಲ. ಈ ವಿಚಾರವಾಗಿ ಅವರು ಯಾರ ಬಳಿಯಲ್ಲೂ ಸಮಾಲೋಚನೆ ನಡೆಸುವುದಿಲ್ಲ. ಬೆಳವಣಿಗೆ ದರ ಕುಸಿದಾಗ ಏನು ಮಾಡಬೇಕೆಂದು ಕೂಡ ಅವರಿಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?
ಕೆಲವು ಹಿಂದೂ ಸಂಘಟನೆಗಳ ಪ್ರಕಾರ ಈಗ ಮಸೀದಿಗಳು ಇರುವ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಇದ್ದವು, ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ, 1991 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೊಕದ್ದಮೆಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಕಾಶಿ,ಮಥುರಾದ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ನೀಡಬೇಕು ಎಂದು ಕೆಲವು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಗಡಿ ವಿಚಾರವಾಗಿ ಚೀನಾದೊಂದಿಗೆ ಸರ್ಕಾರ ವ್ಯವಹರಿಸುತ್ತಿರುವ ರೀತಿ ಕೂಡ ನನಗೆ ತೃಪ್ತಿದಾಯಕವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ
1991ರ ಕಾಯ್ದೆಯ ಪ್ರಕಾರ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ಅಥವಾ ಸ್ವರೂಪದಲ್ಲಿ ಬದಲಾವಣೆ ಮಾಡಲು ಮೊಕದ್ದಮೆಯನ್ನು ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಆಗಸ್ಟ್ 15, 1947 ರಿಂದ ಚಾಲ್ತಿಯಲ್ಲಿದ್ದ ಸ್ವರೂಪದಲ್ಲೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾಯ್ದೆ ಹೇಳುತ್ತದೆ ಎಂದಿದ್ದಾರೆ.