ಮಂಗಳೂರು: ನಗರದಲ್ಲಿ ಖಾಸಗಿ ಬಸ್ಗಳ ವರ್ತನೆಗೆ ಮುಗ್ಧ ವಿದ್ಯಾರ್ಥಿಯೋರ್ವ ಬಲಿಯಾಗಿದ್ದಾನೆ. ನಾವೇನು ಮಾಡಿದ್ರೂ ಏನೂ ಆಗಲ್ಲ ಅಂದುಕೊಂಡಿದ್ದ ಖಾಸಗಿ ಬಸ್ಸಿನವರನ್ನು ಪೊಲೀಸರು ಇದೀಗ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಹೌದು. ಮಂಗಳೂರಿನ ಉಳ್ಳಾಲದ ತ್ಯಾಗರಾಜ್ ಮಮತಾ ಕರ್ಕೇರ ಅವರ ಪುತ್ರ, 16 ವರ್ಷದ ಯಶರಾಜ್ ಸೆಪ್ಟೆಂಬರ್ 7ರಂದು ಖಾಸಗಿ ಸಿಟಿ ಬಸ್ಸಿ (Citu Bus) ನಲ್ಲಿ ಬರುತ್ತಿದ್ದಾಗ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಹೆದ್ದಾರಿ (Highway) ಯಲ್ಲಿ ಬಸ್ಸಿನಿಂದ ಎಸೆಯಲ್ಪಟ್ಟಿದ್ದ. ಬಸ್ಸಿನಲ್ಲಿ ರಶ್ ಇದ್ದ ಕಾರಣ ಫುಟ್ ಬೋರ್ಡ್ ಮೇಲೆ ನೇತಾಡುತ್ತಾ ಹೋಗುತ್ತಿದ್ದಾಗ ಹುಡುಗ ಹೊರಗೆ ಎಸೆಯಲ್ಪಟ್ಟಿದ್ದು, ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ.
ಚಿಂತಾಜನಕ ಸ್ಥಿತಿಯಲ್ಲಿದ್ದ ಯಶರಾಜ್ ನನ್ನು ಬದುಕಿಸಲು ವೈದ್ಯರು (Doctor) ಶತ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಕಳೆದ ಮಂಗಳವಾರ ಸಂಜೆ ಮೆದುಳು ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದ್ದು, ಮಗನನ್ನು ಕಳಕೊಂಡ ದುಃಖದ ನಡುವೆಯೂ ಹೆತ್ತವರು ಅಂಗಾಂಗ ದಾನ ಮಾಡಿದ್ದಾರೆ. ಮಗನ ಸಾವಿಗೆ ಕಾರಣವಾದ ಖಾಸಗಿ ಬಸ್ ನ ವಿರುದ್ದ ಕ್ರಮಕ್ಕೆ ದ.ಕ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಿದ್ದು ಇಂದು ಬಸ್ಸಿನ ಚಾಲಕ, ನಿರ್ವಾಹಕನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮ್ಯಾನೇಜರ್ ನಂಬರ್ ಕೇಳಿದ್ದೆ ತಪ್ಪಾ? – ಬಟ್ಟೆ ಚಿಂದಿಯಾಗುವಂತೆ ವ್ಯಕ್ತಿಗೆ ಹೊಡೆದ್ರು ಮಹಿಳೆಯರು
ಕೆಎ- 19 ಎಎ-0833 ನಂಬರ್ ನ ಖಾಸಗಿ ಬಸ್ಸಿನ ಡ್ರೈವರ್ (Driver) ಕಾರ್ತಿಕ್ ಶೆಟ್ಟಿ, ನಿರ್ವಾಹಕ ದಂಶೀರ್ ನನ್ನು ಬಂಧಿಸಿದ್ದು ಬಸ್ಸನ್ನು ವಶಕ್ಕೆ ಪಡೆಯಲಾಗಿದೆ. ಖಾಸಗಿ ಬಸ್ಸುಗಳ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಯಶ್ ರಾಜ್ ಸಾವನ್ನಪ್ಪಿದ್ದಾರೆ. ಪುಟ್ ಬೋರ್ಡ್ ನಲ್ಲಿ ಪ್ರಯಾಣಿಕರ ತುಂಬಿಸಿ ನಿರ್ಲಕ್ಷ್ಯ ತೋರುತ್ತಾರೆ ಎಂದು ಯಶ್ ರಾಜ್ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಸೌತ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಹಾವಳಿ ಇಂದು ನೆನ್ನೆಯದ್ದಲ್ಲ. ಅದೇ ರೀತಿ ರಸ್ತೆ ಕೂಡ ಅವ್ಯವಸ್ಥೆ ಸ್ಥಿತಿ ಯಾವಾಗಲೂ ಇರುತ್ತೆ. ಈ ಎಲ್ಲದರ ಮಧ್ಯೆ ಯಶ್ ರಾಜ್ ಸಾವಿಗೆ ನ್ಯಾಯ ಸಿಗುತ್ತಾ ಅನ್ನೋದ್ರ ಜೊತೆಗೆ ಈ ವ್ಯವಸ್ಥೆಯ ಕಾರಣದಿಂದ ಒಂದು ಅಮಾಯಕ ಜೀವ ಬಲಿಯಾಗಿದ್ದು ದುರಂತ.