ಗದಗ: ಅಗ್ನಿಪಥ್ ವಿಚಾರದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ ಅಂತ ಗೊತ್ತಾಗ್ತಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ಗದಗ ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಬಗ್ಗೆ ಪ್ರಧಾನಿಗಳು ತೆಗೆದುಕೊಂಡ ನಿಲುವು ಒಳ್ಳೆಯದಿದೆ. ಪ್ರತಿಯೊಬ್ಬರಿಗೂ ದೇಶಾಭಿಮಾನ, ದೇಶದ ಮೇಲೆ ಪ್ರೀತಿ, ಗೌರವ ಇರಬೇಕು. ಯುವಕರಿಗೆ ದೇಶದ ಪ್ರೇಮ ಮೂಡಿಸುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ. ಇದನ್ನು ವಿರೋಧ ಪಕ್ಷಗಳು ಹಾಗೂ ಇತರೆ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಅಗ್ನಿಪಥ್ ಯೋಜನೆ ಹೆಸರಲ್ಲಿ ಯುವಕರನ್ನು ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಯುವಕರಿಗೆ ತಪ್ಪು ಸಂದೇಶ ನೀಡಿ ಬೀದಿಗಿಳಿಸುವ ಕೆಲಸ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಪಕ್ಷ ಎಂದು ಗಂಭೀರ ಆರೋಪ ಮಾಡಿದರು. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಆದರೆ ಭ್ರಷ್ಟಾಚಾರದ ದೊಡ್ಡ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಆರೋಪಿಸಿದರು. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಪಾಸ್ ಆದ 43 ವರ್ಷದ ಅಪ್ಪ – ಫೇಲ್ ಆದ ಮಗ
ವಿಶ್ವ ಯೋಗಾ ದಿನದಂದು ಪ್ರಧಾನಿಗಳು ಮೈಸೂರಿಗೆ ಬರುತ್ತಿರುವುದು ರಾಜ್ಯಕ್ಕೆ ಹೆಮ್ಮೆ ಹಾಗೂ ಶಕ್ತಿ ಇದ್ದಂತೆ. ಪ್ರಧಾನಿಗಳು ರಾಜ್ಯಕ್ಕೆ ಬರುವುದು ರಾಜಕಾರಣಕ್ಕಲ್ಲ. ವಿಶ್ವಕ್ಕೆ ಒಂದೊಳ್ಳೆ ಸಂದೇಶ ನೀಡಲು ಬರುತ್ತಿದ್ದಾರೆ. ಇದು ರಾಜಕೀಯ ಲಾಭ ಅಂತ ಕಾಂಗ್ರೆಸ್ನವರಿಗೆ ಅನಿಸಬಹುದು. ಆದರೆ ಕಾಂಗ್ರೆಸ್ ಅವಧಿಯ ಪ್ರಧಾನಿಗಳು ಕರ್ನಾಟಕದ ಬಗ್ಗೆ ಕಿಂಚಿತ್ತೂ ಆಗ ಕಾಳಜಿ ವಹಿಸಿಲ್ಲ ಎಂದರು.
ಇಡಿ ವಿಚಾರಣೆಗೆ ಒಳಪಡಿಸಿದ್ರೆ ಹಾದಿಬೀದಿ ರಂಪಾಟ ಮಾಡುವ ಇವರೆಲ್ಲಾ ನಮ್ಮ ಪ್ರಧಾನಿ ಬಗ್ಗೆ ಟೀಕೆ ಮಾಡುವ ಯಾವುದೇ ನೈತಿಕತೆ ಇಲ್ಲ ಎಂದರು. ಈ ವೇಳೆ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್