ಕೋಲಾರ: ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ತನ್ನ ತಂದೆ ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಸಲ್ಲಿಸಿರುವ ಅಪರೂಪದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.
ಮುಳಬಾಗಿಲು ತಾಲೂಕಿನ ಕೊತ್ತೂರು ರಾಮಾಪುರ ಗ್ರಾಮದ ಲೋಕೇಶ್ ಎಂಬವರು ಒಂದು ವರ್ಷದ ಹಿಂದೆಯಷ್ಟೇ ಮೃತಪಟ್ಟಿದ್ದ ತಮ್ಮ ತಂದೆ ಗೋವಿಂದ ರಾಜ್ ಅವರ ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಸಂಬಂಧಿಯಾಗಿರುವ ಲೋಕೇಶ್ ತಮ್ಮ ತಂದೆ ಮೃತಪಟ್ಟು ಒಂದು ವರ್ಷವಾಗಿದ್ದು, ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ಇಂದು ಹೆಲಿಕಾಪ್ಟರ್ ಮೂಲಕ ಪುಷ್ಪರ್ಚಾನೆ ಹಾಗೂ ನೂರಾರು ಜನರಿಗೆ ಅನ್ನದಾನ ಮಾಡಿದರು. ಲೋಕೇಶ್ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ತಮ್ಮ ಹುಟ್ಟೂರಿನಲ್ಲಿ ಸುಮಾರು 25 ಲಕ್ಷ ರೂ. ಖರ್ಚು ಮಾಡಿ ಬೃಹತ್ ಸಮಾಧಿ ಕಟ್ಟಿಸಿದ್ದಾರೆ. ಈ ನಡುವೆ ಇಂದು ಒಂದು ವರ್ಷದ ಅಂಗವಾಗಿ ವಿಶೇಷವಾಗಿ ಆಚರಣೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಸಲ್ಲಿಸಲಾಗಿದೆ ಎಂದರು. ನಮ್ಮ ತಂದೆ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದಕ್ಕೂ ಏನೂ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ನಮನ ಸಲ್ಲಿಸಿದ್ದೇವೆ ಎಂದರು ಲೋಕೇಶ್.