ಬೆಂಗಳೂರು: ಸಬ್ ಅರ್ಬನ್ ರೈಲ್ವೇ ಯೋಜನೆಗೆ ದಿವಂಗತ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ (Ananth Kumar) ಹೆಸರು ಇಡುವುದಾಗಿ ಸಚಿವ ವಿ. ಸೋಮಣ್ಣ (Somanna) ಘೋಷಣೆ ಮಾಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಸಬ್ ಅರ್ಬನ್ ರೈಲ್ವೇ ಯೋಜನೆ (Suburban Railway Project) ಬಗ್ಗೆ ಬಿಜೆಪಿ (BJP) ಸದಸ್ಯ ಗೋಪಿನಾಥ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವ ಸೋಮಣ್ಣ, ಸಬ್ ಅರ್ಬನ್ ರೈಲ್ವೇ ಅನಂತ್ ಕುಮಾರ್ ಅವರ ಕನಸನ ಯೋಜನೆ. ನಾನು ಬಿಜೆಪಿ ಬರಲು ಅವರೇ ಮುಖ್ಯ ಕಾರಣ. ಈ ಯೋಜನೆ ಬೆಂಗಳೂರಿಗೆ ಬರಲು ಸಾಕಷ್ಟು ಶ್ರಮ ಹಾಕಿದ್ದಾರೆ. ಹೀಗಾಗಿ ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಬರ್ಬನ್ ರೈಲ್ವೇ ಯೋಜನೆಗೆ ಅನಂತ್ ಕುಮಾರ್ ಹೆಸರು ಇಡುವ ಚಿಂತನೆ ಇದೆ ಎಂದರು.
ಯೋಜನೆಗೆ ಕೇಂದ್ರ ಸರ್ಕಾರದ ಅನುದಾನವೂ ಇರುವುದರಿಂದ ಕೇಂದ್ರದ ಅನುಮತಿ ಇದಕ್ಕೆ ಬೇಕಾಗುತ್ತದೆ. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಿ ಅನಂತ್ ಕುಮಾರ್ ಹೆಸರು ಇಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್
ಇನ್ನು ಸಬ್ ಅರ್ಬನ್ ರೈಲ್ವೇ ಯೋಜನೆಗೆ ಈಗಾಗಲೇ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದಾರೆ. 4 ಭಾಗಗಳಾಗಿ ಯೋಜನೆ ಕೈಗೆತ್ತುಕೊಳ್ಳಲಾಗುತ್ತಿದೆ. ಈಗಾಗಲೇ ಮೊದಲ ಹಂತಕ್ಕೆ ಟೆಂಡರ್ ಪ್ರಕ್ರಿಯೆ ಆಗಿ, ಸಿವಿಲ್ ಕೆಲಸ ಪ್ರಾರಂಭ ಆಗಬೇಕು. ಶೀಘ್ರವೇ ಕೆಲಸ ಪ್ರಾರಂಭ ಮಾಡುತ್ತೇವೆ. ಇನ್ನು ಉಳಿದ 3 ಭಾಗಗಳ ಕಾಮಗಾರಿ ಕೂಡಾ ಶೀಘ್ರವೇ ಪ್ರಾರಂಭ ಮಾಡಿ, ನಿಗದಿತ ಸಮಯಕ್ಕೆ ಯೋಜನೆ ಮುಗಿಸುವ ಕೆಲಸ ಮಾಡುತ್ತೇನೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ರತನ್ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ