ಬೆಳಗಾವಿ: ಮನೆಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಸಾವನ್ನಪ್ಪಿದ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಶಿವಾಪೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪೂರ ಗ್ರಾಮದ ಮನೆಯೊಂದರಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿದ್ದು, ಮೃತನನ್ನು ಶಿವಾಪೂರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂದು ಶಂಕಿಸಲಾಗಿದೆ. ಮನೆಯಲ್ಲಿಯೇ ಸಾವನ್ನಪ್ಪಿದ ಮನುಷ್ಯನ ಅಸ್ಥಿಪಂಜರ ಅಂದಾಜು 8 ರಿಂದ 9 ತಿಂಗಳ ಹಿಂದೆ ಸಾವಾಗಿರೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಯಾರೂ ನೋಡದ ಪರಿಣಾಮ ಆಸ್ತಿಪಂಜರದ ರೀತಿಯಲ್ಲಿ ಕಾಣುತ್ತಿದೆ. ಗ್ರಾಮಸ್ಥರ ಮಾಹಿತಿ ಪ್ರಕಾರ, ಅಸ್ಥಿಪಂಜರ ಗ್ರಾಮದ ಪ್ರಕಾಶ ಎಂಬನದ್ದಾಗಿದೆ. ಬುದ್ಧಿಮಾಂದ್ಯನಾಗಿದ್ದ ಆತ ಮನೆಯಲ್ಲಿ ತಾನೊಬ್ಬನೇ ವಾಸಮಾಡುತ್ತಿದ್ದ. ಹಳೆ ಕಟ್ಟಡದಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದ ಪ್ರಕಾಶ್ ಪದವೀಧರನಾಗಿದ್ದ. ಮನೆಯ ಒಳಗಡೆ ಕೀಲಿ ಹಾಕಿಕೊಂಡು ಇರುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ
ಸದ್ಯ ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಮೌನೇಶ್ವರ ಮಾಲಿಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾಗಿದೆಯೋ? ಅಥವಾ ಕಾಯಿಲೆಯಿಂದ ಸಾವನ್ನಪ್ಪಿದ್ದಾರೋ ಅಥವಾ ಹಸಿವಿನಿಂದ ಮೃತಪಟ್ಟಿದಾರೋ ಎಂಬುವುದನ್ನು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಬೇಕಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.