-ಜೆಡಿಎಸ್ನಲ್ಲಿ ಎಸ್ ತೆಗೆದು, ಜೆಡಿ ಫ್ಯಾಮಿಲಿ ಎಂದು ಮಾಡಬೇಕು
ಚಿಕ್ಕಮಗಳೂರು: ಭಾರತದ ಇತಿಹಾಸದಲ್ಲಿ ಯಾರಾದರೂ ಓರ್ವ ಪ್ರಧಾನ ಮಂತ್ರಿ ಇಷ್ಟೊಂದು ಸುಳ್ಳು ಹೇಳಿರುವ ವ್ಯಕ್ತಿ ಯಾರಾದರೂ ಬಂದಿದ್ದರೆ ಅದು ನರೇಂದ್ರ ಮೋದಿ. ಹೋದಲೆಲ್ಲಾ ಯುವಕರೆಲ್ಲರೂ ಮೋದಿ… ಮೋದಿ… ಮೋದಿ… ಅಂತಿದ್ರು, ಈಗ ಮೋದಿ ಎಲ್ಲರಿಗೂ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ಹಿನ್ನೆಲೆ ನಡೆದ ಗ್ರಾಮ ಸ್ವರಾಜ್ಯ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಬಹಳ ದೊಡ್ಡ ಡ್ರಾಮಾಟಿಸ್ಟ್ ಆ್ಯಕ್ಟರ್. ಮೋದಿ ಏನು ಹೇಳುತ್ತಾರೋ ಅದಕ್ಕೆ ಉಲ್ಟಾ ತಿಳಿದುಕೊಳ್ಳಿ. ಸುಳ್ಳು ಬರೀ ಸುಳ್ಳು ಮೋದಿ ಸುಳ್ಳುಗಾರ. ಬಿಜೆಪಿ ನಾಯಕರು ಮೋದಿ ಸೆರಗು ಇಟ್ಟುಕೊಂಡು ಬಂದಿರೋ ಗಿರಾಕಿಗಳು ಎಂದು ಬಿಜೆಪಿಗರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮಾಸ್ಕ್ ಧರಿಸದಿದ್ರೆ ಇನ್ಮುಂದೆ ನಗರ ಪ್ರದೇಶದಲ್ಲಿ 250, ಹಳ್ಳಿಗಳಲ್ಲಿ 100 ರೂ. ದಂಡ ಫಿಕ್ಸ್
ನಮ್ಮ ಹುಡುಗರೆಲ್ಲಾ ಯಂಗ್ಸ್ಟರ್ಸ್ ಅನೇಕ ಕಡೆಗಳಲ್ಲಿ ಹೋದಲೆಲ್ಲಾ ಮೋದಿ… ಮೋದಿ… ಮೋದಿ… ಅಂತಿದ್ರು. ಈಗ ಮೋದಿ ಎಲ್ಲರಿಗೂ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ. ಈ ದೇಶವನ್ನು ಸಾಲಗಾರರ ದೇಶ ಮಾಡಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೆ ದೇಶದ ಮೇಲೆ ಇದ್ದ ಸಾಲ 51 ಲಕ್ಷದ 33 ಸಾವಿರ ಕೋಟಿ. ಇವತ್ತು 135 ಲಕ್ಷ ಕೋಟಿ. ಕಳೆದ ಏಳು ವರ್ಷದಲ್ಲಿ ನರೇಂದ್ರ ಮೋದಿಯವರು 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಪಕ್ಷದವರಿಗೆ ಭ್ರಷ್ಟಾಚಾರ ಮಾಡೋದು ಅವರಿಗೆ ನೀರು ಕುಡಿದಂತೆ. ಬಸವರಾಜ್ ಬೊಮ್ಮಾಯಿ ಇದ್ದಾನಲ್ಲ ಅವನು ಓರ್ವ ಅಧಿಕಾರಿ ಹತ್ರ ತನಿಖೆ ಮಾಡಿಸ್ತೀನಿ ಅಂತಾನೆ. ನೀವೇ ತಿನ್ನದು ನೀವೇ ತನಿಖೆ ಮಾಡಿಸೋದು. ಇದು ಹೇಗೆ ಸಾಧ್ಯ? ಕುರಿ ಕಾಯಿ ತೋಳ ಅಂದ್ರೆ ಸಂಬಳವೇ ಬೇಡ ಅಂದಂಗಾಯ್ತು. ಬಸವರಾಜ್ ಬೊಮ್ಮಾಯಿ ನೀವು ಭ್ರಷ್ಟಾರದ ಅಪವಾದದಿಂದ ತಪ್ಪಿಸಿಕೊಳ್ಳಬೇಕು ಅಂದ್ರೆ ಸ್ವತಂತ್ರ ಆಯೋಗವನ್ನ ಮಾಡಿ ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ನಿಂದ ತನಿಖೆ ಮಾಡಿಸಿ. ಸತ್ಯ ಹೊರಗೆ ಬರುತ್ತೆ. ನಮ್ಮ ಕಾಲದ್ದು ಸೇರಿಸಿ ತನಿಖೆ ಮಾಡಿ. ನಾವೇನು ವಿರೋಧ ಮಾಡಲ್ಲ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದ್ರೆ ತನಿಖೆ ಮಾಡಿಸಿ ಎಂದರು. ಇದನ್ನೂ ಓದಿ: ಪೋಷಕರು 2 ಡೋಸ್ ಲಸಿಕೆ ಪಡೆಯದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ: ಅಶೋಕ್
ಆ ಜೆಡಿಎಸ್ ಅಂತ ಇದ್ಯಲ್ಲ ಅದನ್ನು ಎಸ್ ತೆಗೆದು ಜೆಡಿ ಫ್ಯಾಮಿಲಿ ಅಂತ ಮಾಡಬೇಕು ಜೆಡಿಎಫ್. ನಾನು ಎಲ್ಲರಿಗೂ ಹೇಳುತ್ತಿಲ್ಲ. ಅವರ ಕುಟುಂಬದವರಿಗೆ ಮಾತ್ರ ಹೇಳುತ್ತಿದ್ದೇನೆ ಎಂದು ಜೆಡಿಎಸ್ ವಿರುದ್ಧ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ