ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ RSS ಬಗ್ಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ. ಬೇಕಿದ್ದರೆ RSS ಬಗೆಗಿನ ಪುಸ್ತಕ ಕಳುಹಿಸುತ್ತೇನೆ. ಅದನ್ನು ಓದಿ ತಿಳಿದುಕೊಳ್ಳಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಈಚೆಗಷ್ಟೇ `ಆರ್ಎಸ್ಎಸ್ ಭಾರತೀಯ ಮೂಲದವರೇ’ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬರುವುದಾದರೆ ನಾನೇ ಕರೆದುಕೊಂಡು ಹೋಗಿ ಆರ್ಎಸ್ಎಸ್ ಕಚೇರಿ ತೋರಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
ಆರ್ಎಸ್ಎಸ್ ದೇಶ ಸೇವೆ ಮಾಡುತ್ತಿದೆ. ಸಿದ್ದರಾಮಯ್ಯಗೆ ಆರ್ಎಸ್ಎಸ್ ಬಗ್ಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ. ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ. ಕಾಂಗ್ರೆಸ್ ಪಕ್ಷದಲ್ಲೇ ಅವರ ಹೇಳಿಕೆಗೆ ಕಿಮ್ಮತ್ತಿಲ್ಲ. ಮೊದಲು ಅವರ ಮಾತು ಭಾಷಣವನ್ನು ಎಲ್ಲರೂ ಕೇಳುತ್ತಿದ್ದರು. ಅದರೀಗ ಅವರ ಮಾತಿನಲ್ಲಿ ತೂಕವಿಲ್ಲ. ನಾವೂ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಶಿಕ್ಷಣದಲ್ಲಿ ಕೇಸರಿಕರಣ ಮಾಡಲ್ಲ: ಇನ್ನೂ ಪಠ್ಯ ಪುಸ್ತಕ ಸಮಿತಿಯನ್ನ ಕೈಬಿಡಬೇಕೆಂಬ ಹೆಚ್.ವಿಶ್ವನಾಥ್ ಹೇಳಿಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ಯಾವಗಾಲೂ ಅಡ್ವೈಸ್ ಕೊಡ್ತಾ ಇರ್ತಾರೆ. ಒಳ್ಳೆಯ ಅಂಶಗಳನ್ನ ಪರಿಗಣಿಸುತ್ತೇವೆ. ಯಾವುದೇ ಕಾರಣಕ್ಕೂ ಕೇಸರಿಕರಣ ಮಾಡುತ್ತಿಲ್ಲಾ. ಯಾರೊಬ್ಬರೂ ಪುಸ್ತಕವನ್ನ ಕಂಪ್ಲೀಟ್ ಆಗಿ ಓದಿಲ್ಲಾ. ಬರೀ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವನಾಥ್ ಒಳ್ಳೆಯ ಅಡ್ವೈಸ್ ಪರಿಗಣಿಸುತ್ತೀವಿ: ವಿಶ್ವನಾಥ್ ಅವರು ಕೇವಲ ಕರ್ನಾಟಕಕ್ಕೆ ಅಡ್ವೈಸ್ ಮಾಡುವುದಿಲ್ಲಾ. ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ವಿಚಾರಗಳನ್ನ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರು ಹೇಳುವ ಒಳ್ಳೆದನ್ನ ಪರಿಗಣಿಸುತ್ತೇವೆ, ಕೆಟ್ಟದನ್ನ ಕೈಬಿಡುತ್ತೇವೆ ಎಂದು ಸ್ವಪಕ್ಷಿಯರಾದ ವಿಶ್ವನಾಥ್ ಅವರ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.