ಬೆಂಗಳೂರು: ಪಕ್ಷದಲ್ಲಿದ್ದುಕೊಂಡೇ ಪಕ್ಷದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಪಕ್ಷಕ್ಕೆ ಭವಿಷ್ಯದಲ್ಲಿ ಹಾನಿಯಾಗುವಂತಹ ಚಟುವಟಿಕೆಗಳು ತಮ್ಮಿಂದ ನಡೆದರೆ ಅದು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಸಮ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರ ಸಭೆ ನಡೆಸಿದರು. ಈ ಹಿಂದೆ ಪಕ್ಷದಿಂದ ಅಧ್ಯಕ್ಷರಾಗಿದ್ದ ಹೆಳವರಹುಂಡಿ ಸೋಮ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಹಾಗೂ ಗುಂಪುಗಾರಿಕೆ ಕಾರಣದಿಂದಾಗಿ ಶ್ರೀ ಸಿದ್ದರಾಮಯ್ಯನವರು ಸೋಮು ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು. ಇದರಿಂದ ತೆರವಾಗಿರುವ ಅಧ್ಯಕ್ಷರ ಹುದ್ದೆಗೆ ಇದೇ ತಿಂಗಳು 29 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಟಿ ನರಸೀಪುರ ಕಾಂಗ್ರೆಸ್ ಪುರಸಭಾ ಸದಸ್ಯರ ಹೊಂದಾಣಿಕೆ ಸಮಸ್ಯೆಯ ಕಾರಣದಿಂದಾಗಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಪಕ್ಷದ ಬಿ. ಫಾರಂನಲ್ಲಿ ಗೆದ್ದಿರುವ ತಾವು ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರೆ ಈಗಲೇ ಪಕ್ಷದಿಂದ ಹೊರ ಹೋಗಿ ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಿ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಪಕ್ಷದಲ್ಲಿದ್ದುಕೊಂಡೇ ಪಕ್ಷದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಪಕ್ಷಕ್ಕೆ ಭವಿಷ್ಯದಲ್ಲಿ ಹಾನಿಯಾಗುವಂತಹ ಚಟುವಟಿಕೆಗಳು ತಮ್ಮಿಂದ ನಡೆದರೆ ಅದು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಸಮ ಎಂಬುದು ಸಾಬೀತಾಗುತ್ತದೆ ಎಂದು ಆಕ್ರೋಶಭರಿತರಾಗಿ ಮಾತನಾಡಿದ್ದಾರೆ ಎಂಬುದು ತಿಳಿದುಬಂದಿದೆ. ಹಾಗೆಯೇ ಈ ಹಿಂದೆ ಕೆಲವು ಕಾಂಗ್ರೆಸ್ ಪುರಸಭಾ ಸದಸ್ಯರು ನಡೆದುಕೊಂಡ ರೀತಿಯ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಹಾಗೆ ಎಲ್ಲರೂ ಒಟ್ಟಿಗೆ ಪಕ್ಷ ಕಟ್ಟುವ ವಿಚಾರದಲ್ಲಿ ಪರಸ್ಪರ ವಿಶ್ವಾಸ ಹಾಗೂ ನಂಬಿಕೆಯಿಂದ ನಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್
ಅಂದು ನಡೆದ ಸಭೆಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ ಬಿಜೆ ವಿಜಯ್ ಕುಮಾರ್ ಅವರಿಗೆ ಸ್ಥಳದಲ್ಲಿಯೇ ಪ್ರತಿಯೊಬ್ಬರಿಗೂ ವಿಪ್ ಜಾರಿ ಮಾಡುವಂತೆ ಆದೇಶ ಮಾಡಿ, ಉಲ್ಲಂಘನೆ ಮಾಡಿದವರಿಗೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಹಾಗೂ ಪುರಸಭಾ ಸದಸ್ಯತ್ವದ ಅನರ್ಹಗೊಳಿಸಲು ಕೂಡಲೇ ಕಾನೂನು ಹೋರಾಟಕ್ಕೆ ಗಂಭೀರವಾಗಿ ಪರಿಗಣಿಸಲು ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗದಂತೆ ಜಿಲ್ಲಾ ಅಧ್ಯಕ್ಷರಿಗೆ ಖಡಕ್ ಆದೇಶ ನೀಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.
ಪುರಸಭಾ ಸದಸ್ಯರ ಪ್ರತಿಯೊಬ್ಬರ ಅಭಿಪ್ರಾಯ ಕೇಳಲಾಗಿದ್ದು. ಅದರಲ್ಲಿ ಪ್ರತಿಯೊಬ್ಬರೂ ಸಿದ್ದರಾಮಯ್ಯನವರ ಅಂತಿಮ ಆದೇಶವನ್ನು ನಾವುಗಳು ಪಾಲಿಸುತ್ತೇವೆ. ಯಾವುದೇ ಬದಲಾವಣೆ ಇರುವುದಿಲ್ಲ ನಮಗೆ ತಾವೇ ನಾಯಕರು ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.
ಅಕ್ಟೋಬರ್ 28 ರಂದು ಅಧ್ಯಕ್ಷರ ಹೆಸರನ್ನು ಸೂಚಿಸಲು ಅಲ್ಲಿಯ ತನಕ ಯಾವುದೇ ಭಿನ್ನಮತ ಅಥವಾ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಜೊತೆಗೂಡಿ ಸಭೆ ಮಾಡುವುದನ್ನು ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಲಕಾಡು ಮಂಜುನಾಥ್, ರಮೇಶ್ ಮುದ್ದೆಗೌಡ, ಪುರಸಭಾ ಸದಸ್ಯರಾದ ಸೋಮು, ಶ್ರೀಮತಿ ಪ್ರೇಮ ಮರಯ್ಯ, ನಂಜುಂಡಸ್ವಾಮಿ, ಬಾದಾಮಿ ಮಂಜು, ಹೇಮಂತ್, ಶ್ರೀಮತಿ ಬೇಬಿ ಹೇಮಂತ್, ಶ್ರೀಮತಿ ನಾಗರತ್ನ ಮಾದೇಶ್, ಶ್ರೀಮತಿ ರಾಜೇಶ್ವರಿ ರಾಘವೇಂದ್ರ, ಶ್ರೀಮತಿ ಮಹದೇವಮ್ಮ, ನಾಗರಾಜ್, ಮದನ್ ರಾಜ್, ಪಕ್ಷೇತರ ಸದಸ್ಯ ಸಾಹಿದ್ ಸಭೆಯಲ್ಲಿ ಭಾಗವಹಿಸಿದ್ದರು.