ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲದ ಹನೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಬಿಎಸ್ ಯಡಿಯೂರಪ್ಪ ಅವರ ಕಾಲೆಳೆದು ಹಾಸ್ಯ ಚಾಟಕಿ ಹಾರಿಸಿದ್ದಾರೆ.
ಯಡಿಯೂರಪ್ಪ ಅವರಿಗೆ ಗಂಟಲು ಕೆಟ್ಟಿದೆ. ಶುಕ್ರವಾರ ಬಿಎಸ್ವೈ ತವರೂರು ಕೆ.ಆರ್.ಪೇಟೆಯಲ್ಲಿ ಉತ್ಸಾಹದಿಂದ ಇದ್ದರು. ಅಲ್ಲಿ ಧೂಳಿನಲ್ಲೂ ಹಲವು ಕಿಲೋಮೀಟರ್ ಪಾದ ಯಾತ್ರೆ ಮಾಡಿದ್ದರು. ಹುರುಪಿನಲ್ಲಿ ತವರೂರಿನಲ್ಲಿ ಮಾತನಾಡಿದ್ದಕ್ಕೆ ಗಂಟಲು ಕೆಟ್ಟಿದೆ. ಗಂಟಲು ಕೆಟ್ಟಿರುವುದಕ್ಕೆ ಹನೂರಿನಲ್ಲಿ ಮಾತನಾಡಲ್ಲ ಎನ್ನುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಗಂಟಲು ಸಮಸ್ಯೆ ನಡುವೆಯೂ ಭಾಷಣ ಮಾಡಿದ ಬಿಎಸ್ವೈ, ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಹೋಗುತ್ತಾರೆ. ಮೋದಿ ಉಪವಾಸ ಇದ್ದು ಮಂಜುನಾಥನ ದರ್ಶನ ಮಾಡುತ್ತಾರೆ. ಇದೀಗ ರಾಹುಲ್ ಗಾಂಧಿಗೆ ದೇವಸ್ಥಾನಗಳು ನೆನಪಾಗಿವೆ. ಚುನಾವಣೆ ಹತ್ತಿರ ಬಂದಿರುವುದಕ್ಕೆ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಎಂದು ಗಂಟಲು ಸಮಸ್ಯೆ ನಡುವೆಯೂ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಮಂಡ್ಯದ ಮಳವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಬಿಎಸ್ವೈ ಗಂಟಲಿನ ತೊಂದರೆ ಎದುರಿಸಿದ್ದರು. ಈ ವೇಳೆ ಕೇವಲ ನಾಲ್ಕು ನಿಮಿಷ ಮಾತನಾಡಿ ಭಾಷಣ ಮುಗಿಸಿದ್ದರು.