ಬೆಳಗಾವಿ: ಸಚಿವ ಸ್ಥಾನ ಸೇರಿದಂತೆ ಅನೇಕ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಅವರಾಗಿಯೇ ನೀಡಿದ್ದು, ಅದಕ್ಕಾಗಿ ನಾನು ಯಾರಿಗೂ ಹಣವಾಗಲೀ, ಅರ್ಧ ಕಪ್ ಚಹಾವನ್ನಾಗಲಿ ಕುಡಿಸಿಲ್ಲ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಚಿವರ ಪದವಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಈವರೆಗೆ ನಾನು ಯಾರಿಗೂ ಅರ್ಧ ಕಪ್ ಚಹಾ ಸಹ ಕುಡಿಸಿಲ್ಲ. ಆದರೂ ನಾನು ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ಸೇರಿ ರಾಜ್ಯದ ಹತ್ತಾರು ಹುದ್ದೆಯನ್ನು ನಿರ್ವಹಿಸಿದ್ದೇನೆ. ಏಳೆಂಟು ಜವಾಬ್ದಾರಿ ಇದೆ. ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೇನೆ ಎಂದರು.
ಇಂದಿನವರೆಗೂ ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದ್ದು, ಅಂಗೈಯಲ್ಲಿ ಕನ್ನಡಿ ಹಿಡಿದರೆ ಹೇಗೆ ಕಾಣ್ತಾರಲ್ಲ ಹಂಗೆ ನಾನು. ಹೆಚ್ಚಿನ ಜವಾಬ್ದಾರಿ ಇರುವುದರಿಂದ ಕೆಆರ್ಡಿಎಫ್ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಾನು ಒಂದು ರೂಪಾಯಿ ಯಾರಿಗೂ ಕೊಡದೇ, ಅರ್ಧ ಕಪ್ ಚಹಾ ಕುಡಿಸದೇ ನನಗೆ ಇಷ್ಟು ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಿದರು.
ಯತ್ನಾಳ್ ಅವರು ಸುಳ್ಳು ಹೇಳುತ್ತಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಬಹಳ ದೊಡ್ಡವರು. ಅವರು ಏಕೆ ಹೇಳಿದರೋ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದು ಸೂಕ್ತವಲ್ಲ. ಏಕೆ ಅವರು ಈ ರೀತಿ ಹೇಳಿದ್ದಾರೆ, ಯಾರು ಆಫರ್ ನೀಡಿದ್ದಾರೆ ಎನ್ನುವುದರ ಕುರಿತು ಅವರನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಸಂಪುಟ ವಿಸ್ತರಣೆ ಕಸರತ್ತು: ನಾಳೆ ದೆಹಲಿಗೆ ಸಿಎಂ
ಸತ್ಯ ಸುಳ್ಳು ನಾನು ಪರಿಶೀಲನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿ ವಿಚಾರ ಮಾಡಿ ಹೇಳಿಕೆ ಕೊಡಬೇಕು. ನಾವೆಲ್ಲರೂ ಕೂಡ ಅರಿತುಕೊಳ್ಳಬೇಕಾಗುತ್ತದೆ. ನಾನು 33 ವರ್ಷ ರಾಜಕಾರಣದಲ್ಲಿ ಇದ್ದೇನೆ. ಸಿಎಂಗಳ ಜೊತೆ ಹತ್ತಿರದಲ್ಲಿ ಕೆಲಸ ಮಾಡಿದ್ದೇನೆ. ಏನು ಬೇಕಾದರೆ ಹೇಳಬಹುದು. ಆದರೆ ಈ ರೀತಿಯ ಹೇಳಿಕೆಯನ್ನು ಸರಿಯಲ್ಲ ಎಂದು ಟಾಂಗ್ ನೀಡಿದರು.
ಇದೇ ವೇಳೆ ಯತ್ನಾಳ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷ ಎಲ್ಲವನ್ನೂ ಅವಲೋಕನ ಮಾಡುತ್ತದೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಪಕ್ಷ ತೆಗೆದುಕೊಳ್ಳುತ್ತದೆ. ಅವರ ವಿರುದ್ಧ ಕ್ರಮದ ಬಗ್ಗೆ ಹಿರಿಯ ನಾಯಕರು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಕೆಲವೊಂದು ಕೋಮುವಾದಿ ಸಂಘಟನೆಗಳು ನಿರಂತರವಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ: ಸಲೀಂ ಅಹ್ಮದ್