ಜೈಪುರ: ರಾಜಸ್ಥಾನದ ಜಲೋರ್ನಲ್ಲಿ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ರೆಸಾರ್ಟ್ ನಿರ್ಮಿಸುವುದಕ್ಕಾಗಿ ಆಶ್ರಮದ ಜಾಗವನ್ನು ನೀಡುವಂತೆ ಬಿಜೆಪಿ ಶಾಸಕರೊಬ್ಬರು ಒತ್ತಡ ಹೇರಿದ್ದರಿಂದ ಮನನೊಂದು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಸ್ವಾಮೀಜಿಯನ್ನು ರವಿನಾಥ್(60) ಎಂದು ಗುರುತಿಸಲಾಗಿದೆ. ಭಿನ್ಮಾಲ್ ಶಾಸಕ ಪೂರ ರಾಮ್ ಚೌಧರಿ ಅವರು ರೆಸಾರ್ಟ್ ನಿರ್ಮಿಸುವುದಕ್ಕಾಗಿ ಆಶ್ರಮದ ಜಾಗವನ್ನು ನೀಡುವಂತೆ ಸ್ವಾಮೀಜಿಯವರಿಗೆ ಒತ್ತಾಯಿಸಿದ್ದರಿಂದ ರವಿನಾಥ್ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಅದರಲ್ಲಿರುವ ಯಾವುದೇ ಅಂಶಗಳನ್ನು ಬಹಿರಂಗ ಪಡಿಸಿರಲಿಲ್ಲ. ರಾಜಪುರ ಗ್ರಾಮದ ಸುಂಧಾ ಮಾತಾ ದೇವಸ್ಥಾನದ ತಪ್ಪಲಿನಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯವರ ಮೃತ ದೇಹ ಪತ್ತೆಯಾಗಿದ್ದು, ಮೃತದೇಹವನ್ನು ಕೆಳಗಿಳಿಸಲು ಆಶ್ರಮದ ಭಕ್ತರು ಅವಕಾಶ ನೀಡಿರಲಿಲ್ಲ. ಸೂಸೈಡ್ ನೋಟ್ನಲ್ಲಿರುವ ಅಂಶವನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದರು.
ಈ ಮಧ್ಯೆ ಬಿಜೆಪಿ ಶಾಸಕ ಪೂರಾರಾಮ್ ಚೌದರಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಪಾರದರ್ಶಕ ರೀತಿಯಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ. ಸ್ವಾಮೀಜಿಗಳ ದೂರಿನ ಆಧಾರದ ಮೇಲೆ ಶಾಸಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಲೋರ್ ಎಸ್ಪಿ ಹರ್ಷವರ್ಧನ್ ಅಗರ್ ವಾಲ್ ತಿಳಿಸಿದ್ದಾರೆ.
ರವಿನಾಥ್ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಶುಕ್ರವಾರ ತಿಳಿದು ಬಂದಿದ್ದು, ಮೃತದೇಹವನ್ನು ಇನ್ನೂ ಮರದಿಂದ ಕೆಳಗೆ ಇಳಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದು, ಈ ಬಗ್ಗೆ ಭಕ್ತರ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಅವಳಿಗೆ ಮಗು ನೋಡಿಕೊಳ್ಳೋಕೆ ಕಷ್ಟ ಅಂತಿದ್ರೆ ನಾನೇ ನೋಡಿಕೊಳ್ತಿದ್ದೆ: ಪತಿ ಕಣ್ಣೀರು
ಈ ಹಿಂದೆ ಆಶ್ರಮ ಇರುವ ಜಾಗಕ್ಕೆ ಶಾಸಕ ಪೂರ ರಾಮ್ ಚೌಧರಿ ಮಾಲೀಕರಾಗಿದ್ದರು. ಇದೀಗ ಆಶ್ರಮವಿರುವ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾದಾಗ ವಿವಾದ ಸೃಷ್ಟಿಯಾಗಿದೆ. ಸದ್ಯ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆಶ್ರಮದ ಸುತ್ತಾ ಭದ್ರತೆ ವಹಿಸಿದ್ದಾರೆ.