ಕೊಪ್ಪಳ: ಶೋಷಿತರು ಸದಾ ಹಿಂದೆ ಬೀಳಲು ಮುಖ್ಯ ಕಾರಣವೇ ಮೌಢ್ಯಾಚರಣೆ ಮತ್ತು ಅನಕ್ಷರತೆಯಾಗಿದ್ದು, ಅತ್ಯಂತ ಹೆಚ್ಚಿನ ಪ್ರೊಟೀನ್ ಇರುವ ಕುಂಬಳಕಾಯಿಯನ್ನೇ (Pumpkin) ನಾವು ಕೇಳಲು ಪ್ರಾರಂಭಿಸಬೇಕು ಎಂದು ಶಾಸಕ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ (Satish Jarkiholi) ಕರೆ ನೀಡಿದರು.
ಕೊಪ್ಪಳ (Koppala) ತಾಲೂಕಿನ ಲೇಬಗೇರಿ ಹತ್ತಿರದ ಹಟ್ಟಿ ಕ್ರಾಸ್ ಬಳಿ ಖಾಸಗಿ ನಿವೇಶನದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಬಹುತ್ವ ಭಾರತದ ಸವಾಲುಗಳು ಚಿಂತನಾ ಶಿಬಿರವನ್ನು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದ ಅವರು, ಶೋಷಿತ ವರ್ಗದ ಜನರು ಶಿಕ್ಷಣವನ್ನು ಪಡೆಯುವ ಮೂಲಕ ಮೂಢನಂಬಿಕೆಯನ್ನು ಬಿಡಬೇಕು. ನಮ್ಮನ್ನು ವಿಷಕಾರಿ ಬದನೆಕಾಯಿ ತಿನ್ನಲು ಹಚ್ಚಿರುವ ಕೆಲವು ಜನರು ತಾವು ಮಾತ್ರ ಅತ್ಯಂತ ಹೆಚ್ಚಿನ ಪೋಷಕಾಂಶ ಇರುವ ಕುಂಬಳಕಾಯಿಯನ್ನು ದಾನ ಪಡೆದು ಅಲ್ಲಿಯೂ ನಮ್ಮನ್ನು ಶೋಷಿಸಿದ್ದಾರೆ ಎಂದು ಕಿಡಿಕಾರಿದರು.
ಈ ಹಿನ್ನೆಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಮೂಲಕ ತಲಾತಲಾಂತರದಿಂದ ನಮ್ಮ ತಲೆಯಲ್ಲಿ ತುಂಬಿರುವ ಸುಳ್ಳನ್ನು ಹೋಗಲಾಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅದು ಅತ್ಯಂತ ನಿಧಾನವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ತಾವು ಸಹ ಒಂದು ದಿನ ಶಿಬಿರದಲ್ಲಿ ಪಾಲ್ಗೊಂಡು ಎಲ್ಲಾ ಅರಿತುಬಿಟ್ಟಿದ್ದೇನೆ ಎನ್ನಲು ಆಗಲ್ಲ. ಸಮಾಧಾನದಿಂದ ವರ್ಷಪೂರ್ತಿ ತಿಳಿದುಕೊಂಡು ಸಾಗಬೇಕಿದೆ ಎಂದರು.
ಮಾನವ ಬಂಧುತ್ವ ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡಲ್ಲ. ಇದೊಂದು ಪಕ್ಷಾತೀತ ಶೋಷಿತರ ಸಂಘಟನೆಯಾಗಿದೆ. ಚುನಾವಣೆಗಳಲ್ಲಿ ಯಾರ ಪರವಾಗಿ ಮತ ಚಲಾವಣೆ ಮಾಡಬೇಕು ಎಂದು ಯೋಚಿಸುವಾಗ ಯಾರು ನಿಮ್ಮ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಗೌರವ ಹೊಂದಿದ್ದಾರೆ, ಅವುಗಳನ್ನು ರಕ್ಷಿಸುವ ಭರವಸೆ ಸಿಗುತ್ತದೆ, ಅಂತವರನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು. ಇದನ್ನೂ ಓದಿ: ಅಧಿಕಾರಿಗಳಂತೆ ನಟಿಸಿ ಮೊಬೈಲ್ ಟವರ್ನ್ನೇ ಕದ್ದ ಖದೀಮರು
ಒಂದು ವರ್ಗ ಇತಿಹಾಸವನ್ನೇ ತಿರುಚಿ ಸುಳ್ಳನ್ನೇ ಇತಿಹಾಸ ಮಾಡುವ ಹುನ್ನಾರವಿದೆ. ದೇಶದ ಇತಿಹಾಸ ಸರಿ ಇಲ್ಲ, ಅದನ್ನು ಬದಲಿಸಿ ಬರೆಯಬೇಕಿದೆ ಎನ್ನುತ್ತಿರುವ ದೇಶದ ಆಡಳಿತ ಪಕ್ಷದ ಸಚಿವರ ಮಾತು ಖಂಡನೀಯ ಎಂದರು. ಇದನ್ನೂ ಓದಿ: ಡಿ.1 ರಿಂದ ಸುರತ್ಕಲ್ ಬಂದ್, ಹೆಜಮಾಡಿ ಟೋಲ್ ಜೊತೆ ವಿಲೀನ – ದರ ಎಷ್ಟು?