ಬೆಂಗಳೂರು: ಈ ಹಿಂದೆ ಬಿಂದಾಸ್ ಗೂಗ್ಲಿ ಎಂಬ ಚಿತ್ರ ನಿರ್ದೇಶನ ಮಾಡಿದ್ದವರು ಸಂತೋಷ್ ಕುಮಾರ್. ಕಾಲೇಜ್ ಕಾರಿಡಾರಿನಲ್ಲಿ ನಡೆಯುವ ಯೂಥ್ಫುಲ್ ಕಥೆ ಹೇಳಿದ್ದ ಅವರೀಗ ಪಕ್ಕಾ ಹಾರರ್ ಥ್ರಿಲ್ಲರ್ ಕಥೆಯೊಂದನ್ನು ಎರಡೆರಡು ಭಾಷೆಗಳಲ್ಲಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಪಾರ್ವತಮ್ಮನವರ ತಂಗಿ ಮಗ ಈ ಸಂತೋಷ್ ಕುಮಾರ್. ಏಕಕಾಲದಲ್ಲಿಯೇ ಹಿಂದಿ ಮತ್ತು ಕನ್ನಡದಲ್ಲಿ ನಿರ್ದೇಶನ ಮಾಡಲು ಮುಂದಾಗಿರೋ ಹೊಸ ಚಿತ್ರಕ್ಕೆ ಮೃತ್ಯುಲಿಪಿ ಪುರಾಣಂ ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.
ಈ ಚಿತ್ರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿರೋ ತಂತ್ರಜ್ಞರೇ ಕಾರ್ಯ ನಿರ್ವಹಿಸಲಿದ್ದಾರಂತೆ. ಬಾಲಿವುಡ್ ನ ನಟ ನಟಿಯರೇ ಮುಖ್ಯ ಪಾತ್ರವನ್ನೂ ನಿರ್ವಹಿಸಲಿದ್ದಾರಂತೆ. ಇದೀಗ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ.
ಇದು ಇಡೀ ವಿಶ್ವವನ್ನು ಬೆಚ್ಚಿಬೀಳಿಸುತ್ತಲೇ ಕಗ್ಗಂಟಾಗುಳಿದಿರುವ ಬರ್ಮುಡಾ ಟ್ರಯಾಂಗಲ್ ನಿಂದ ಸ್ಫೂರ್ತಿಗೊಂಡು ರಚಿಸಲ್ಪಟ್ಟಿರೋ ಕಥೆಯನ್ನು ಹೊಂದಿದೆ. ಮೀಡಿಯಾದಲ್ಲಿ ಕೆಲಸ ಮಾಡೋ ಹುಡುಗರು ಅಸೈನ್ಮೆಂಟ್ ಕಾರಣದಿಂದ ಒಂದು ಪ್ರದೇಶಕ್ಕೆ ತೆರಳುತ್ತಾರೆ. ಅದು ಹೋದವರನ್ನೆಲ್ಲ ಕಣ್ಮರೆ ಮಾಡುವ ವಿಚಿತ್ರ ಪ್ರದೇಶ. ಇಂಥಲ್ಲಿಗೆ ಈ ಹುಡುಗರ ಟೀಮು ಹೋದ ನಂತರ ಆಗೋ ಕಥನ ಹಾರರ್ ಮತ್ತು ಥ್ರಿಲ್ಲರ್ ಶೈಲಿಯಲ್ಲಿ ಬಿಚ್ಚಿಕೊಳ್ಳುತ್ತದೆಯಂತೆ.
ಇದೀಗ ಈ ಚಿತ್ರಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿರೋ ಸಂತೋಷ್ ಬೇಗನೆ ಚಿತ್ರೀಕರಣ ಮುಗಿಸಿಕೊಂಡು ವಿಶ್ವಾಧ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv