ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನ ತಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿ ನಟ ಅಭಿಷೇಕ್ ಅವರ ಮೊದಲ ಸಿನಿಮಾಗೆ ಶುಭಕೋರಿದ್ದ ನಿಖಿಲ್ರ ನಡೆಗೆ ಮಾಜಿ ಸಿಎಂ ಎಂಎಸ್ ಕೃಷ್ಣ ಮೆಚ್ಚುಗೆ ಸೂಚಿಸಿದ್ದಾರೆ.
ನಿಖಿಲ್ ನಡೆಯ ಕುರಿತು ಟ್ವೀಟ್ ಮಾಡಿರುವ ಎಂಎಸ್ಕೆ, ಅಭಿಷೇಕ್ ಅವರ ಹೊಸ ಸಿನಿಮಾಗೆ ಶುಭ ಕೋರಿದ್ದ ನಿಮ್ಮ ಪೋಸ್ಟನ್ನು ನಾನು ನೋಡಿದ್ದೇನೆ. ನಿಮ್ಮ ನಡೆಯಿಂದ ಪ್ರಭಾವಿತನಾಗಿದ್ದು, ಇದನ್ನೇ ರಾಜಕೀಯ ಪ್ರಬುದ್ಧತೆ ಎಂದು ಕರೆಯುತ್ತೇವೆ. ರಾಜಕೀಯ ಬದುಕಿನಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಬದುಕು ರಾಜಕಾರಣಕ್ಕಿಂತಲೂ ದೊಡ್ಡದು. ಇದೇ ರೀತಿ ಮುಂದುವರಿದರೆ, ನಿನಗೆ ಜಯ ಖಂಡಿತ ಲಭಿಸುತ್ತದೆ ಎಂದು ಶುಭ ಹಾರೈಸಿದ್ದಾರೆ.
ಮಂಡ್ಯ ಸೋಲಿನ ನಂತರವೂ ಅಭಿಷೇಕ್ಗೆ ಶುಭ ಕೋರಿದ್ದ ನಿಖಿಲ್, ಶುಕ್ರವಾರ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ `ಅಮರ್’ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ `ಅಮರ್’ ಚಿತ್ರವನ್ನು ನೋಡಿ. ಅಭಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಮೊದಲಿಗೆ ಅಭಿಷೇಕ್ಗೆ ವಿಶ್ ಮಾಡಿದ್ದರು.
ನಿಖಿಲ್ ವಿಶ್ಗೆ ಪ್ರತಿಕ್ರಿಯೆ ನೀಡಿದ್ದ ಅಭಿಷೇಕ್, ಧನ್ಯವಾದ ಗೆಳೆಯ. ನಿಜಕ್ಕೂ ಇದು ಖುಷಿಯ ವಿಚಾರ. ನಿನಗೂ ಗೊತ್ತಿರುತ್ತೆ. ಮೊದಲ ಸಿನಿಮಾ ಬಿಡುಗಡೆ ಆಗುವ ದಿನ ಹೇಗಿತ್ತು ಅನ್ನೋದು. ನಿನ್ನ ಮಾತುಗಳು ನನ್ನ ಮೇಲಿರುವ ಪ್ರೀತಿಯನ್ನ ತೋರುತ್ತದೆ. ಮತ್ತು ಕನ್ನಡ ಸಿನಿಮಾ ರಂಗದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ನಾವಿಬ್ಬರು ಇದೇ ರೀತಿ ಮುಂದುವರಿಯೋಣ. ಒಬ್ಬ ಸ್ನೇಹಿತನಾಗಿ ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ. ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ. ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ.
ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ. ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರಿದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೆ ಕೆಲಸ ಮಾಡಬಹುದು. ಮಂಡ್ಯದ ಬಗ್ಗೆ ನೀವು ಹೇಳಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿ. ನಿಮ್ಮ ಮಾತುಗಳಿಗೆ ಧನ್ಯವಾದಗಳು ಎಂದಿದ್ದರು.