ಚಾಮರಾಜನಗರ: ಹೊಸ ವರ್ಷದ ಮುನ್ನಾ ದಿನ ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡೇ ಆಗಮಿಸಿತ್ತು. ಕ್ರಿಸ್ಮಸ್ ದಿನದಿಂದಲೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಸಾವಿರ ಜನರು ಸಫಾರಿ ಮಾಡಿದ್ದು, ಅರಣ್ಯ ಇಲಾಖೆಗೆ 22 ಲಕ್ಷ ರೂ. ಆದಾಯ ಬಂದಿದೆ.
ಬಂಡೀಪುರದಲ್ಲಿ ಇಂದು ಮತ್ತು ನಾಳೆ ಅರಣ್ಯ ಇಲಾಖೆಯ ಕಾಟೇಜ್, ಡಾರ್ಮೆಟರಿಗಳಲ್ಲಿ ವಾಸ್ತವ್ಯ ಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಬೆಳಗ್ಗೆ, ಸಂಜೆ ಸಫಾರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿವಿಧೆಡೆಯಿಂದ ಪ್ರವಾಸಿಗರ ದಂಡು ಲಗ್ಗೆ ಇಟ್ಟಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಮಾಸ್ಕ್ ಧರಿಸಿ ಬಂದಿದ್ದರೂ ಸಹ ಸಾಮಾಜಿಕ ಅಂತರ ಮಾಯವಾಗಿತ್ತು. ಇದನ್ನೂ ಓದಿ: ಮುಂಬೈಯಲ್ಲಿ ಜ.15ರವರೆಗೆ 144 ಸೆಕ್ಷನ್ ಜಾರಿ – ಸಂಜೆ 5 ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ
ಅದಲ್ಲದೇ ಚಾಮರಾಜನಗರ ಜಿಲ್ಲಾದ್ಯಂತ ರೆಸಾರ್ಟ್ ಗಳು ಹೌಸ್ ಪುಲ್ ಆಗಿವೆ. ರೆಸಾರ್ಟ್ ನಲ್ಲಿ ಡಿಜೆ, ಪಾರ್ಟಿ, ಪೈರ್ ಕ್ಯಾಂಪ್ ಗೆ ಬ್ರೇಕ್ ಹಾಕಲಾಗಿದೆ. ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲೂ ಕೋವಿಡ್ ನೆಗೆಟಿವ್ ರಿಪೋರ್ಟ್, ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದಾರೆ. ಆದರೂ ಹೊಸ ವರ್ಷದ ಆಚರಣೆ ಹಿನ್ನೆಲೆ ರೆಸಾರ್ಟ್ ಗಳೆಲ್ಲ ತುಂಬಿ ತುಳುಕುತ್ತಿವೆ.