Bengaluru City
ಗಣರಾಜ್ಯೋತ್ಸವ- ಕರ್ನಾಟಕದಿಂದ ವಿಜಯನಗರ ಕಲಾ ಶ್ರೀಮಂತಿಕೆಯ ಸ್ತಬ್ಧಚಿತ್ರ ಪ್ರದರ್ಶನ

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರಾಜ್ಯದಿಂದ ಹಂಪಿಯ ವಿಜಯನಗರ ಕಲಾ ಶ್ರೀಮಂತಿಕೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದಿಂದ ವಿಜಯನಗರದ ಕಲಾ ಶ್ರೀಮಂತಿಕೆ ಬಿಂಬಿಸುವ ಸ್ತಬ್ಧಚಿತ್ರದ ಪ್ರದರ್ಶನ ನಡೆಯಲಿದೆ. ವಿಜಯನಗರ ಪರಿಕಲ್ಪನೆಯ ಸ್ತಬ್ಧಚಿತ್ರದಲ್ಲಿ ಅಂಜನಾದ್ರಿ ಬೆಟ್ಟ, ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ, ಹಜಾರರಾಮ ದೇವಸ್ಥಾನ, ಉಗ್ರ ನರಸಿಂಹನ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ.
ಗಣರಾಜ್ಯೋತ್ಸವಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಯೋದ್ಯೆಯ ರಾಮ ಮಂದಿರ ಹಾಗೂ ದೀಪೋತ್ಸವವನ್ನು ಸಹ ಸ್ತಬ್ಧಚಿತ್ರಗಳಲ್ಲಿ ಬಿಂಬಿಸಲಾಗುತ್ತಿದೆ. ಒಟ್ಟು 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿವೆ. ರಾಜ್ಯದಿಂದ ವಿಜಯನಗರ ಸಾಮ್ರಾಜ್ಯದ ಕಲಾ ಶ್ರೀಮಂತಿಕೆಯನ್ನು ತೋರಿಸಲಾಗುತ್ತಿದೆ.
