ನವದೆಹಲಿ : ಡಿಸೆಂಬರ್ 2000ರಲ್ಲಿ ದೆಹಲಿಯ ಕೆಂಪುಕೋಟೆಯ (Red Fort) ಸೇನಾ ಬ್ಯಾರಕ್ ಮೇಲೆ ದಾಳಿ ನಡೆಸಿದ ಲಷ್ಕರ್-ಎ-ತೊಯ್ಬಾ (LeT terrorist) ಉಗ್ರಗಾಮಿ ಮೊಹಮ್ಮದ್ ಅಶ್ಫಾಕ್ ಆರಿಫ್ (Mohammad Arif) ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ (Supreme Court) ಖಾಯಂಗೊಳಿಸಿದೆ.
ಸಿಜೆಐ ಯು.ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು ಆರೀಫ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಅಪರಾಧಿ ಮತ್ತು ಶಿಕ್ಷೆಯ ಆದೇಶವನ್ನು ಗಮನಿಸಿ ಯಾವುದೇ ಹಸ್ತಕ್ಷೇಪವನ್ನು ಸಮರ್ಥಿಸುವುದಿಲ್ಲ ಎಂದು ಮುಖ್ಯ ನ್ಯಾ. ಯು.ಯು ಲಲಿತ್ ಅಭಿಪ್ರಾಯಪಟ್ಟಿದ್ದಾರೆ.
ದಾಳಿಯ ಮಾಸ್ಟರ್ ಮೈಂಡ್ ಅಪರಾಧಿಯಾಗಿರುವ ಪಾಕಿಸ್ತಾನಿ ವ್ಯಕ್ತಿ ಅಶ್ಫಾಕ್ ಆರಿಫ್ಗೆ 2005ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು. ದೆಹಲಿ ಹೈಕೋರ್ಟ್ 2007ರಲ್ಲಿ, 2011ರಲ್ಲಿ ಸುಪ್ರೀಂಕೋರ್ಟ್ ಕೆಳ ನ್ಯಾಯಲಯದ ಆದೇಶವನ್ನು ಎತ್ತಿಹಿಡಿತ್ತು. ಇದನ್ನೂ ಓದಿ: ಬಸವಲಿಂಗ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮ
ಜನವರಿ 2014ರಲ್ಲಿ ಮರುಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಲಾಗಿತ್ತು. ಆದಾಗ್ಯೂ, 2016ರಲ್ಲಿ ಸುಪ್ರೀಂಕೋರ್ಟ್ ಆರಿಫ್ಗೆ ಮರಣದಂಡನೆಯ ವಿರುದ್ಧ ಹೋರಾಡಲು ಮತ್ತೊಂದು ಅವಕಾಶವನ್ನು ನೀಡಿತ್ತು. ಸೆಪ್ಟೆಂಬರ್ 2014ರ ಸಾಂವಿಧಾನಿಕ ಪೀಠವು ಶಿಕ್ಷೆಗೊಳಗಾದ ಕೈದಿಗಳ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಅನುಮತಿ ನೀಡಿತ್ತು.
ಡಿಸೆಂಬರ್ 2000ರಲ್ಲಿ ನಡೆದ ದಾಳಿಯಲ್ಲಿ 3 ಜನರು ಕೆಂಪು ಕೋಟೆಯಲ್ಲಿ ಸಾವನ್ನಪ್ಪಿದ್ದರು. ಘಟನೆಯ 3 ದಿನಗಳ ನಂತರ ಆರಿಫ್ ಹಾಗೂ ಪತ್ನಿ ರೆಹಮಾನಾ ಯೂಸುಫ್ ಫಾರೂಕಿಯನ್ನು ಬಂಧಿಸಲಾಯಿತು. ವಿಚಾರಣಾ ನ್ಯಾಯಾಲಯವು ಅಕ್ಟೋಬರ್ 2005ರಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಭಾರತದ ವಿರುದ್ಧ ಯುದ್ಧ ಮಾಡುವ ಆರೋಪದಡಿಯಲ್ಲಿ ಅವರನ್ನು ಮತ್ತು ಇತರ 6 ಜನರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆತನಿಗೆ ಮರಣದಂಡನೆ ವಿಧಿಸಲಾಯಿತು. ಆದರೆ ಇತರರಿಗೆ ವಿವಿಧ ಅವಧಿಗಳ ಜೈಲು ಶಿಕ್ಷೆಯಾಗಿತ್ತು. ಇದನ್ನೂ ಓದಿ: ದಲಿತರಿಗೆ ಚಪ್ಪಲಿ ಕಾಯುವ ಕೆಲಸ – ಇದು ಸಿದ್ದು ಸರ್ಕಾರದ ಆದೇಶ ಎಂದ ಬಿಜೆಪಿ
ಸೆಪ್ಟೆಂಬರ್ 2007ರಲ್ಲಿ ದೆಹಲಿ ಹೈಕೋರ್ಟ್ ಅಶ್ಫಾಕ್ ಆರಿಫ್ ಅಪರಾಧಿ ಎಂದು ಪ್ರಕಟಿಸಿತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಲ್ಲಾ ಇತರ ಸಹ-ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಪ್ರಾಸಿಕ್ಯೂಷನ್ ಪ್ರಕಾರ, 2000 ಇಸ್ವಿಯ ಡಿಸೆಂಬರ್ 22ರ ರಾತ್ರಿ ಇಬ್ಬರು ಬಂದೂಕುದಾರಿ ಉಗ್ರರು ಕೆಂಪು ಕೋಟೆಯನ್ನು ಪ್ರವೇಶಿಸಿ ಸೇನಾ ಪೂರೈಕೆ ಡಿಪೋ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಸೈನಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.