ಚಿತ್ರದುರ್ಗ: ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಹಿನ್ನೆಲೆಯಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಜಾಮೀನು ಮಂಜೂರಾದ ಬಳಿಕ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ತಿಳಿಸಿದರು.
ಅತ್ಯಾಚಾರ ಆರೋಪ ಬಂದಿರುವ ಮುರುಘಾ ಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಸದ್ಯಕ್ಕೆ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಯಾವುದೇ ಪಿತೂರಿ ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಮಕ್ಕಳಿಗೆ ನಾನೇ ರಕ್ಷಣೆ ನೀಡಿದ್ದೇನೆ ಎಂದರು.
ನಾನು ಸಂತ್ರಸ್ತ ಬಾಲಕಿಯರ ರಕ್ಷಣೆಗೆ ನಿಂತಿದ್ದೇನೆ. ನಾನು ಆಡಳಿತ ಅಧಿಕಾರಿಯಾಗಿದ್ದಾಗ ವಿಚಾರ ಗೊತ್ತಿದ್ದರೆ ಆಗಲೇ ರಕ್ಷಣೆ ಕೊಡುತ್ತಿದ್ದೆ. ಅನ್ಯಾಯವಾಗಿದೆ ಎಂದು ಗೊತ್ತಾದ ತಕ್ಷಣ ನಾನು, ನನ್ನ ಪತ್ನಿ, ಮಗ ಅವರಿಗೆ ರಕ್ಷಣೆ ನೀಡಿದ್ದೇವೆ. ಆಡಳಿತಾಧಿಕಾರಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಮಠದಲ್ಲಿ ಷಡ್ಯಂತ್ರ ನಡೆಯಿತು. ಅದಕ್ಕಾಗಿ ಈಗಾಗಲೇ ಜಾಮೀನು ಅರ್ಜಿ ಹಾಕಿದ್ದೆ. ಈಗ ನನಗೆ ಜಾಮೀನು ಸಿಕ್ಕಿದೆ ಎಂದು ತಿಳಿಸಿದರು.