ಮೈಸೂರು/ಬೆಂಗಳೂರು: ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. ರಾಣಿ ತ್ರಿಷಿಕಾ ಕುಮಾರಿಗೆ ಗಂಡು ಮಗುವಿನ ಜನನವಾಗಿದ್ದು, ರಾಜಮಾತೆ ಪ್ರಮೋದಾದೇವಿ ಮತ್ತು ರಾಜ ಯದುವೀರ್ ಮುಖದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನ ಹಿನ್ನಲೆಯಲ್ಲಿ ತ್ರಿಷಿಕಾರನ್ನು ಖಾಸಗಿ ಆಸ್ಪತ್ರೆಯಲ್ಲಿ ಕರೆತರಲಾಗಿತ್ತು. ಬುಧವಾರ ರಾತ್ರಿ 9.50 ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು.
ತ್ರಿಷಿಕಾ ಜೊತೆಯಲ್ಲೇ ಇರುವ ಯದುವೀರ್, ರಾಜಮಾತೆ ಪ್ರಮೋದಾದೇವಿ ಮತ್ತು ತ್ರಿಷಿಕಾ ತಾಯಿ ಯೋಗಕ್ಷೆಮ ನೋಡಿಕೊಳ್ಳುತ್ತಿದ್ದಾರೆ. ಯುವರಾಜನ ಆಗಮನ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡೇಶ್ವರಿಗೆ ಒಡೆಯರ್ ವಂಶಸ್ಥರು ಪೂಜೆ ಸಲ್ಲಿಸುವ ಸಾಧ್ಯತೆ ಇದೆ. 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಯದುವೀರ್ ರನ್ನು ರಾಜಮನೆತನದ ಉತ್ತರಾಧಿಕಾರಿಯನ್ನಾಗಿ ಪ್ರಮೋದಾದೇವಿ ಒಡೆಯರ್ ದತ್ತು ಪಡೆದಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ್ದ ಸಂದರ್ಭದಲ್ಲಿ ಇಡೀ ಮೈಸೂರು ನಗರಕ್ಕೆ ಎತ್ತಿನ ಗಾಡಿಗಳಲ್ಲಿ ಸಿಹಿ ತಿಂಡಿಯನ್ನು ಕೊಂಡೊಯ್ದು ಜನರಿಗೆ ಹಂಚಲಾಗಿತ್ತು.